ಹೊಸದಿಗಂತ ವರದಿ ಕಲಬುರಗಿ:
ಪಾಪದ ಹಣದಲ್ಲಿ ರಾಜ್ಯ ಸರ್ಕಾರ ಮುನ್ನಡೆಸುವ ಅವಶ್ಯಕತೆ ಇಲ್ಲ ಎಂದು ಆಳಂದ ತಾಲೂಕಿನ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ರಾಜ್ಯ ಸರ್ಕಾರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗ್ರಾಮ ಪಂಚಾಯಿತಿ ವ್ಯಾಪ್ತಿಗೊಂದು ಮಧ್ಯದ ಅಂಗಡಿಯನ್ನು ಆರಂಭಿಸುವ ಕುರಿತಾದ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.
ಗ್ರಾಂ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದ ಅಂಗಡಿಗಳನ್ನು ಯಾವ ಪುರುಷಾರ್ಥಕ್ಕಾಗಿ ಹೆಚ್ಚಿಸಬೇಕು. ಸರ್ಕಾರವನ್ನು ನಡೆಸಲು ಆರ್ಥಿಕ ಸಮಸ್ಯೆ ಇದ್ದರೆ, ಬೇರೆ ಮಾರ್ಗ ಹುಡುಕೋಣ.ಶ್ರೀಮಂತರಿಗೆ ಉಚಿತ ಭಾಗ್ಯಗಳನ್ನು ಏಕೆ ನೀಡುತ್ತಿದ್ದಾರೆ ನನಗಂತೂ ಗೊತ್ತಿಲ್ಲ.ಶ್ರೀಮಂತರು ಹಾಗೂ ನನ್ನಂತವರಿಗೂ ಉಚಿತ ವಿದ್ಯುತ್ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥ ಆರ್ಥಿಕ ತಜ್ಞರಿದ್ದಾರೆ.ಇದನ್ನು ಮ್ಯಾನೇಜ್ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ.ಈ ವಿಷಯವನ್ನು ನಾನು ಶಾಸಕರ ಸಭೆಯಲ್ಲಿ ಹಾಗೂ ಪಕ್ಷದ ವೇದಿಕೆಯಲ್ಲಿ ಧ್ವನಿ ಎತ್ತುವೇ ಎಂದ ಅವರು, ಒಂದು ವೇಳೆ ರಾಜ್ಯ ಸರ್ಕಾರ ಈ ನಿರ್ಣಯದಿಂದ ಹಿಂದೆ ಸರಿಯದೇ ಹೋದರೆ,ಸರ್ಕಾರದ ವಿರುದ್ಧ ನಾನೇ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಹಾರದಲ್ಲಿ ಸಾರಾಯಿ ನಿಷೇಧ ಮಾಡಿರುವುದರಿಂದಲೇ ಅಪರಾಧ ಪ್ರಕರಣಗಳು ಕಡಿಮೆಯಾಗಿದೆ.ಆದರೆ,ನಮ್ಮ ಸರ್ಕಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯದಂಗಡಿ ಪ್ರಾರಂಭಿಸವುದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದ್ದಾರೆ.