ಹೊಸದಿಗಂತ ವರದಿ ಹಾವೇರಿ :
ಉತ್ತರ ಕರ್ನಾಟಕದ ಹೆಬ್ಬಾಗಿಲು ಯಾಲಕ್ಕಿ ಕಂಪಿನ ನಗರಿ ಎಂಬ ಖ್ಯಾತಿ ಪಡೆದ ಹಾವೇರಿ ಜಿಲ್ಲೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮಬಾರಿಗೆ ಜರಗುತ್ತಿರುವ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸುವತ್ತ ಜಿಲ್ಲಾಡಳಿ, ಜಿಲ್ಲೆಯ ಜನಪ್ರತಿನಿಧಿಗಳು, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹಾಗೂ ಜಿಲ್ಲಾ ಸಮಿತಿಗೆ ನಿರಾಸಕ್ತಿ ಮೂಡಿದಂತೆ ಕಾಣುತ್ತಿದೆ.
ಹೌದು, ಇಂತಹದೊಂದು ಆರೋಪ ಜಿಲ್ಲೆಯ ಸಾರ್ವಜನಿಕ ಹಾಗೂ ಸಾಹಿತ್ಯವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. 82ನೇ ಸಾಹಿತ್ಯ ಸಮ್ಮೇಳನ ಹಾವೇರಿ ಜಿಲ್ಲೆಯಲ್ಲಿ ಜರುಗಬೇಕಿತ್ತು ಆಗ ಹಾವೇರಿ ಜಿಲ್ಲೆಯಲ್ಲಿನ ಜನಪ್ರತಿನಿಧಿಗಳ ಹಾಗೂ ಸಾಹಿತ್ಯಕ ವಲಯದಲ್ಲಿನ ಇಚಾಶಕ್ತಿ ಕೊರತೆಯಿಂದಾಗಿ ಬೇರೆ ಜಿಲ್ಲೆಗೆ ಸ್ಥಳಾಂತರಗೊಂಡಿತು. ಇದೇ ನಿರಾಸಕ್ತಿ 86ನೇ ಸಾಹಿತ್ಯ ಸಮ್ಮೇಳನ ಆಯೋಜನೆಯಲ್ಲಿಯೂ ಕಂಡುಬರುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ಎಡರು ತಿಂಗಳ ಹಿಂದೆ(ನವೆಂಬರ) ಸಮೇಳನ ಜರುಗಬೇಕಿತ್ತು ಆದರೆ ಜನಪ್ರತಿನಿಧಿಗಳ ನಿರುತ್ಸಾಹ ಮತ್ತು ವರುಣನ ಅವಕೃಪೆಯಿಂದಾಗಿ ಸಮ್ಮೇಳನ ಜನೇವರಿಗೆ ಮೂಂದೂಡಲ್ಪಟ್ಟಿತು. ಇದೀಗ ದಿನಾಂಕ ನಿಗದಿಯಾಗಿದ್ದು ಸಮ್ಮೇಳನ ಸಿದ್ಧತೆಯಲ್ಲಿ ವಿಳಂಬದೋರಣೆ ಕಂಡುಬರುತ್ತಿದೆ.
ಸಾಹಿತ್ಯ ಸಮ್ಮೇಳನ ಘೋಷಣೆ ಆದ ನಂತರದಲ್ಲಿ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ಸಮ್ಮೇಳನದ ಸಿದ್ಧತೆ ಮತ್ತು ಉಳಿದೆಲ್ಲ ಸಿದ್ಧತೆಗಳ ಕುರಿತು ಬಹಳ ಉತ್ಸಾಹ ತೋರಿಸಿದ್ದರು ಆದರೆ ಈಗ ಸಮ್ಮೇಳನ ದಿನಾಂಕ ಹತ್ತಿರವಾಗುತ್ತಿದ್ದಂತೆ ಜನಪ್ರತಿನಿಧಿಗಳ ಸುಳಿವು ಕಂಡುಬರುತ್ತಿಲ್ಲ.
ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಇದೆಯೋ ಇಲ್ಲವೋ ಎನ್ನುವ ಭಾವನೆ ಮೂಡುತ್ತಿದೆ. ಜಿಲ್ಲಾ ಸಮಿತಿ ಮೇಲಿಂದ ಮೇಲೆ ಸಭೆ ಮಾಡುವ ಮೂಲಕ ಸದಸ್ಯರನ್ನು ಮತ್ತು ಸಾರ್ವಜನಿಕರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವ ಉಸಾಬರಿಗೆ ಹೋದಂತೆ ಕಾಣುತ್ತಿಲ್ಲ. ಅನೇಕರಿಗೆ ಜಿಲ್ಲಾ ಸಮಿತಿಯಲ್ಲಿ ಯಾರ್ಯಾರಿದ್ದಾರೆ ಎನ್ನುವುದೇ ಗೊತ್ತಿಲ್ಲ ಎನ್ನುವ ಮಾತುಗಳೂ ಸಹ ಈಗ ಕೇಳಿಬರುತ್ತಿವೆ.
ವಿಪ ಸದಸ್ಯರು, ಮಾಜಿ ಶಾಸಕರು ಆಗೊಂದು ಇಗೊಂದು ಸಭೆಗಳನ್ನು ಮಾಡಿ ಹೋದವರು ಮತ್ತೆ ಇತ್ತಕಡೆ ಸುಳಿಯುತ್ತಿಲ್ಲ. ಕೆಲ ಸಮಿತಿಗಳಂತೂ ಇದ್ದೂ ಇಲ್ಲದಂತಾಗಿವೆ. ಅವು ಕೆಲಸ ಮಾಡುತ್ತಿವೆಯೋ ಇಲ್ಲವೋ ಎನ್ನುವ ಭಾವನೆ ಕಾಡುತ್ತಿದೆ. ವಿವಿಧ ಸಮಿತಿಗಳ ರಚನೆ ವಿಳಂಬವಾಗಿತ್ತು. ಅವು ಕಾರ್ಯಾರಂಭ ಮಾಡಿದ್ದು ಮತ್ತಷ್ಟು ವಿಳಂಬ ಈಗಲೂ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.