ಹೊಸದಿಗಂತ ವರದಿ ಕಲಬುರಗಿ:
ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಕೈಗೊಂಡಿರುವ ಪ್ರಜಾಧ್ವನಿ ಬಸ್ ಪಂಚರ್ ಆಗಿದೆ ಎಂದು ಮಾಜಿ ಸಿಎಂ ಬಿಎಸ್ವೈ ಹೇಳಿಕೆ ನೀಡಿದ ಬೆನ್ನಲೇ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ಜೋರಾಗಿದೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ನಮ್ಮ ಬಸ್ ಎಂದಿಗೂ ಪಂಚರ್ ಆಗುವುದಿಲ್ಲ. ಬಿಜೆಪಿಯವರು ಯಡಿಯೂರಪ್ಪ ಅವರನ್ನ ಪಂಚರ್ ಮಾಡಿದ್ದಾರೆ. ಬಿಜೆಪಿ ಬಸ್ಗೆ ಟೈರಲ್ಲಿ ಗಾಳಿನೇ ಇಲ್ಲ, ಅದಕ್ಕಾಗಿ ಪದೇ ಪದೇ ಮೋದಿರನ್ನ ಕರೆಸುತ್ತಿದ್ದಾರೆ. ರಾಜ್ಯದಲ್ಲಿ ಮೋದಿ/ಶಾ ಅವರ ಮೋಡಿ ನಡೆಯುವುದಿಲ್ಲ ಎಂದು ಹೇಳಿದರು.
ಇದಲ್ಲದೇ, 7 ರಿಂದ 8 ಬಿಜೆಪಿ ಹಾಲಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ ಎಂ ಬಿ ಪಾಟೀಲ್, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ನಮ್ಮಲ್ಲಿ ಬೇಧಭಾವ ಇಲ್ಲ. ಬಹಳಷ್ಟು ಜನ ಸಮರ್ಥರಿದ್ದಾರೆ ಎಂದರು.
ಪ್ರಜಾಧ್ವನಿ ಯಾತ್ರೆಗಾಗಿ ಎರಡು ತಂಡಗಳನ್ನಾಗಿ ರಚನೆ ಮಾಡಲಾಗಿದೆ. ಯಾತ್ರೆಗೆ ರಾಜ್ಯದ ವಿವಿಧಡೆ ಜನ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯ ಕುರಿತು ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತ ಹೇಗಿದೆ ಅನ್ನೋದು ಜನರಿಗೆ ಗೋತ್ತಾಗಿದೆ. ಪ್ರಜಾಧ್ವನಿ ಬಸ್ ಯಾತ್ರೆ ಯಶಸ್ವಿಯಾಗಿ ಸಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.