ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಅಹಿಂಸಾ ಪ್ರಿಯರು. ಎಂದೂ ನೆರೆಹೊರೆಯವರಿಗೆ ಹಾನಿ ಮಾಡುವವರಲ್ಲ. ಹಾಗಿದ್ದೂ ಯಾರಾದರೂ ತಪ್ಪು ಮಾರ್ಗ ಅಳವಡಿಸಿಕೊಂಡರೆ ಅವರಿಂದ ಪ್ರಜೆಗಳನ್ನು ರಕ್ಷಿಸುವುದು ರಾಜನ ಕರ್ತವ್ಯ ಎಂದು ಎಂದು ಆರ್ಎಸ್ಎಸ್ ಸರಸಂಘ ಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.
ದಿಲ್ಲಿಯಲ್ಲಿ ದಿ ಹಿಂದೂ ಪ್ರಣಾಳಿಕೆ ಪುಸ್ತಕವನ್ನು ಬಿಡುಗಡೆ ಮಾಡಿದ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿ, ಈ ಹಿಂದೆ ರಾಮನಿಂದ ರಾವಣನ ಸಂಹಾರವಾಗಿತ್ತು. ರಾವಣಗೆ ಸುಧಾರಣೆಗೆ ಅವಕಾಶವನ್ನು ನೀಡಲಾಯಿತು. ಆದರೆ ಆತ ಸುಧಾರಿಸದಿದ್ದಾಗ ದೇವರೇ ಅವನನ್ನು ಕೊಂದನು. ಇದು ಹಿಂಸೆಯಲ್ಲ, ಲೋಕಕಲ್ಯಾಣಾರ್ಥ ನಡೆದ ಅಹಿಂಸೆ. ಇಲ್ಲೂ ರಾಜ ತನ್ನ ಕೆಲಸವನ್ನು ಮಾಡುತ್ತಾನೆ ಎಂದು ಹೇಳಿದರು.
ಈ ಭಯೋತ್ಪಾದಕ ಕೃತ್ಯದ ಬಳಿಕ ದೇಶದಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ವಾತಾವರಣ ಮೂಡಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ನೆರೆಯ ದೇಶದ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಈ ಬೆಳವಣಿಗೆಯು ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟ ಎಂಬುದನ್ನು ನೆನಪಿಸುತ್ತದೆ ಎಂದು ಹೇಳಿದರು.
ಪಹಲ್ಗಾಮ್ನಲ್ಲಿ ಅಮಾಯಕರನ್ನು ಅವರ ಧರ್ಮದ ಬಗ್ಗೆ ವಿಚಾರಿಸಿ ನಂತರ ಅವರನ್ನು ಕೊಲ್ಲಲಾಯಿತು. ಹಿಂದುಗಳು ಎಂದಿಗೂ ಹೀಗೆ ಮಾಡುವುದಿಲ್ಲ. ಇದು ನಮ್ಮ ಸ್ವಭಾವವಲ್ಲ. ದ್ವೇಷ ನಮ್ಮ ಸಂಸ್ಕೃತಿಯಲ್ಲಿಲ್ಲ, ಆದರೆ ನಮಗಾದ ತೊಂದರೆಯನ್ನು ಮೌನವಾಗಿ ಸಹಿಸಿಕೊಳ್ಳುವುದು ಕೂಡಾ ನಮ್ಮ ಸಂಸ್ಕೃತಿಯಲ್ಲಿಲ್ಲ. ನಮ್ಮ ಹೃದಯದಲ್ಲಿ ನೋವು ಇದೆ. ದುಷ್ಟತನವನ್ನು ಕೊನೆಗೊಳಿಸಲು ನಾವು ನಮ್ಮ ಶಕ್ತಿಯನ್ನು ತೋರಿಸಬೇಕು ಎಂದು ಹೇಳಿದರು.