ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೀಡಿದ ಹೇಳಿಕೆ ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ನಿರುದ್ಯೋಗಿ ಯುವಕರು ಸಾಮಾಜಿಕ ಜಾಲತಾಣ, ಮಾಧ್ಯಮ ಹಾಗೂ ಆರ್ಟಿಐ ಚಟುವಟಿಕೆಗಳ ಮೂಲಕ ವ್ಯವಸ್ಥೆಯ ಮೇಲೆ ಜಿರಳೆಗಳಂತೆ ದಾಳಿ ಮಾಡುತ್ತಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ವಕೀಲರ ಹುದ್ದೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ, ಅರ್ಜಿದಾರ ವಕೀಲರ ನಡೆ ಕುರಿತು ಕಿಡಿಕಾರಿತು. “ಕೆಲವರು ವೃತ್ತಿಯಲ್ಲಿ ಯಶಸ್ಸು ಸಿಗದ ಬಳಿಕ ಸಾಮಾಜಿಕ ಮಾಧ್ಯಮ ಮತ್ತು ಆರ್ಟಿಐ ಕಾರ್ಯಕರ್ತರಾಗಿ ಎಲ್ಲರ ಮೇಲೂ ಆರೋಪ ಮಾಡುತ್ತಾರೆ” ಎಂದು ಪೀಠ ಹೇಳಿದೆ.
ಇದನ್ನೂ ಓದಿ:
ಅರ್ಜಿದಾರರು ಸಾಮಾಜಿಕ ಜಾಲತಾಣದಲ್ಲಿ ಬಳಸಿದ ಭಾಷೆಯನ್ನೂ ಪೀಠ ಪ್ರಶ್ನಿಸಿ, ಹಿರಿಯ ವಕೀಲರ ಹುದ್ದೆ ಗೌರವದ ಸಂಕೇತವಾಗಿದ್ದು, ಅದನ್ನು ಬೆನ್ನಟ್ಟುವ ಪದವಿ ಅಲ್ಲ ಎಂದು ತಾಕೀತು ಮಾಡಿತು. “ದೆಹಲಿ ಹೈಕೋರ್ಟ್ ಹಿರಿಯ ವಕೀಲರ ಹುದ್ದೆ ನೀಡಿದರೂ, ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸಬಹುದು” ಎಂದು ಎಚ್ಚರಿಕೆ ನೀಡಲಾಯಿತು.
ಇದೇ ವೇಳೆ, ವಕೀಲರ ಪದವಿಗಳ ನೈಜತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೀಠ, ಅಗತ್ಯವಿದ್ದರೆ ಸಿಬಿಐ ತನಿಖೆಯೂ ನಡೆಯಬೇಕು ಎಂದು ಅಭಿಪ್ರಾಯಪಟ್ಟಿತು. ಬಳಿಕ ಅರ್ಜಿದಾರ ವಕೀಲರು ಕ್ಷಮೆ ಕೇಳಿ ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡರು.



