ಹೊಸದಿಗಂತ ವರದಿ ,ಕುಶಾಲನಗರ:
ವಿದ್ಯುತ್ ಕಡಿತಗೊಂಡಿದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು 7.50ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 13ಸಾವಿರ ರೂ. ನಗದು ಅಪಹರಿಸಿರುವ ಘಟನೆ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ.
ಕುಶಾಲನಗರ-ಹಾಸನ ಹೆದ್ದಾರಿಯ ಹೆಬ್ಬಾಲೆಯ ಮುಖ್ಯ ರಸ್ತೆಯ ಬದಿಯಲ್ಲೇ ಇರುವ ನಾರಾಯಣ ಎಂಬವರ ಮನೆಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.
ನಾರಾಯಣ ಅವರು ಮನೆಯ ಮುಂಭಾಗದ ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಇದೇ ಸಮಯದಲ್ಲಿ ಮನೆಯೊಳಗೆ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಅಪಹರಿಸಿರುವುದಾಗಿ ಹೇಳಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಕುಶಾಲನಗರ ಡಿವೈ ಎಸ್ ಪಿ. ಗಂಗಾಧರಪ್ಪ, ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅರೋಪಿಗಳ ಪತ್ತೆಗಾಗಿ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಲಾಗಿದೆ.