ಹೊಸದಿಗಂತ ಡಿಜಿಟಲ್ ಡೆಸ್ಕ್:
ಆ ಕಳ್ಳರು ಬಹಳ ಬುದ್ಧಿವಂತರು. ಕೇವಲ ‘ಪತ್ರಿಕೆ’ಯನ್ನು ತಂತ್ರವಾಗಿ ಬಳಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಇಂದು ನಾವು ಓದುವ ‘ಪತ್ರಿಕೆ’ಯನ್ನು ಈ ರೀತಿಯೂ ಬಳಸಬಹುದೇ? ಎಂದು ಆಶ್ಚರ್ಯ ಆಗುತ್ತದೆ. ದರೋಡೆಕೋರರು ಬಳಸಿದ ಟೆಕ್ನಿಕ್ ತಿಳಿದರೆ ಏನ್ ಚಾಣಾಕ್ಷ ಗುರು ಅನ್ನೋದು ಗ್ಯಾರೆಂಟಿ.
ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ರವೀಂದ್ರ ಕುಮಾರ್ ಬನ್ಸಾಲ್ ಅವರು ತಮ್ಮ ಪತ್ನಿಯ ಮಗಳೊಂದಿಗೆ ಅಕ್ಟೋಬರ್ 29 ರಂದು ವೈಷ್ಣೋದೇವಿ ಯಾತ್ರೆಗೆ ತೆರಳಿದ್ದರು. ಪ್ರವಾಸಕ್ಕೆ ಹೋಗಿ ಬುಧವಾರ (ನವೆಂಬರ್ 2, 2022)ವಾಪಸ್ ಮರಳಿದ್ದಾರೆ. ಮನೆಯ ಬಾಗಿಲುಗಳು ತೆರೆದಿದ್ದು, ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲಲಿಯಾಗಿ ಬಿದ್ದಿವೆ. ಕಬ್ಬಿಣದ ಜಾಲರಿಯ ಬಾಗಿಲು ಕೂಡ ಅರ್ಧ ತೆರೆದಿತ್ತು. ಕುಟುಂಬ ಸದಸ್ಯರು ಕೂಡಲೇ ಇಡೀ ಮನೆಯನ್ನು ಪರಿಶೀಲಿಸಿದರು. ಮನೆಯಲ್ಲಿದ್ದ 10 ಲಕ್ಷ ರೂ.ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳು ನಾಪತ್ತೆ. ಜೊತೆಗೆ ಕಬೋರ್ಡ್ನಲ್ಲಿದ್ದ ದುಬಾರಿ ಸೂಟ್ಗಲೂ ಮಂಗಮಾಯ.
ಕಳ್ಳತನವಾಗಿದೆ ಎಂದು ತಿಳಿದ ಬಳಿಕ ಮನೆಯನ್ನು ಪರಿಶೀಲಿಸಿದ ಮಾಲೀಕರಿಗೆ ಪತ್ರಿಕೆಯೊಂದು ಬಿದ್ದಿರುವುದು ಕಂಡು ಬಂದಿದೆ. ಇದು ಅಕ್ಟೋಬರ್ 29 ರ ಪತ್ರಿಕೆ. ಮನೆಯವರು ಪ್ರವಾಸಕ್ಕೆ ಹೋದ ದಿನವೇ ಕಳ್ಳರು ಮನೆಗೆ ಬಂದಿರುವುದು ಸ್ಪಷ್ಟವಾಗಿದೆ. ಪತ್ರಿಕೆ ಹಾಕಿದ ಜಾಗದಲ್ಲಿಯೇ ಇದ್ದುದು ಮನೆಯಲ್ಲಿ ಯಾರೂ ಇಲ್ಲ ಎಂದು ಖಾತ್ರಿಪಡಿಸಿಕೊಂಡಿದ್ದಾರೆ. ರವೀಂದ್ರಕುಮಾರ್ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಇದೇ ಸತ್ಯ ಎಂಬುದು ದೃಢಪಟ್ಟಿದೆ.
ಮನೆಯಲ್ಲಿ ಯಾರಾದರೂ ಇದ್ದಿದ್ದರೆ ಪತ್ರಿಕೆ ಇರುತ್ತಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ ಆ ಮನೆಯವರು ಯಾವ ಪತ್ರಿಕೆಯನ್ನೂ ಹಾಕಿಸುತ್ತಿರಲಿಲ್ಲ. ಆದರೆ 29ನೇ ತಾರೀಖಿನ ಪತ್ರಿಕೆ ಇತ್ತು ಎಂದರೆ ಅದು ದರೋಡೆ ಪ್ಲಾನ್ ಎಂದು ರವೀಂದ್ರಕುಮಾರ್ಗೆ ಅರ್ಥವಾಯಿತು. ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಕೆ.ವಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.