ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪಕ್ಷವನ್ನು ಬಲಪಡಿಸುವ ಉದ್ದೇಶದೊಂದಿಗೆ ಜನರಿಗೆ ಹತ್ತಿರವಾಗಲು ಕಾಂಗ್ರೆಸ್ ಪಕ್ಷವು ʼಭಾರತ್ ಜೋಡೋʼ ಯಾತ್ರೆಯನ್ನು ಪ್ರಾರಂಭಿಸಿದ್ದು ಭಾರತ್ ಜೋಡೋ ಯಾತ್ರೆಯ ಮೂರನೇ ದಿನವಾದ ಇಂದು ತಮಿಳುನಾಡಿನ ನಾಗರ್ಕೋಯಿಲ್ ನ ಸ್ಕಾಟ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಧ್ವಜಾರೋಹಣ ಮಾಡಿದ್ದಾರೆ.
ಈ ವೇಳೆ ರೈತರ ಆತ್ಮಹತ್ಯೆಯನ್ನು ಖಂಡಿಸಿ ಜಂತರ್ ಮಂತರ್ ನಲ್ಲಿ ತಲೆಬುರುಡೆಗಳೊಂದಿಗೆ ಪ್ರತಿಭಟನೆ ನಡೆಸಿದ್ದ ತಮಿಳುನಾಡಿನ ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ರಾಹುಲ್ ಗಾಂಧಿಯವರು ಮಾಧ್ಯಮದವರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಕನ್ಯಾಕುಮಾರಿಯಿಂದ ಆರಂಭಗೊಂಡಿರುವ ಈ ಭಾರತ್ ಜೋಡೋ ಯಾತ್ರೆಯು 2ನೇ ದಿನದಂದು ಸುಮಾರು 13 ಕಿಮೀ ವ್ಯಾಪ್ತಿ ಕ್ರಮಿಸಿ ತಮಿಳುನಾಡಿನ ಸುಚಿಂದ್ರಂನಲ್ಲಿರುವ ಶಾಲೆಯಲ್ಲಿ ನಿಲುಗಡೆಗೊಂಡಿತು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು.
ಅವರು 2017 ರಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಂತರ ಆತ್ಮಹತ್ಯೆ ಮಾಡಿಕೊಂಡ ಅನಿತಾ ಅವರ ಕುಟುಂಬ ಸದಸ್ಯರನ್ನು ಭೇಟಿಯಾದರು.
ಈ ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಇದು 3,500 ಕಿಮೀ ದೂರವನ್ನು ಕ್ರಮಿಸಲಿದ್ದು 12 ರಾಜ್ಯಗಳ ಮೂಲಕ ಹಾದುಹೋಗಲಿದೆ. ಸರಿಸುಮಾರು 150 ದಿನಗಳನ್ನು ಈ ಯಾತ್ರೆ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.