ಹೊಸದಿಗಂತ ವರದಿ ಮಡಿಕೇರಿ:
ಈ ದೇಶಕ್ಕೆ ಬೇಕಾಗಿರೋದು ವೇಗದ ಅಭಿವೃದ್ಧಿ, ಅದನ್ನು ನೀಡ್ತಿರೋದು ಮೋದಿ ಸರ್ಕಾರ ಎಂದು ಬಿಜೆಪಿ ಮುಖಂಡ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಬಿಜೆಪಿ ವತಿಯಿಂದ ಆಯೋಜಿಸಲಾಗಿರುವ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲ್ಪಟ್ಟಿದೆ. 9 ವರ್ಷಗಳಿಂದ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ಈ ದೇಶಕ್ಕೆ ಬೇಕಾಗಿರುವುದು ಉತ್ತಮ ಆಡಳಿತ. ಅಭಿವೖದ್ದಿ ಎಷ್ಟು ವೇಗದಲ್ಲಿ ಸಾಗಿದೆ ಎಂಬುದು ಮೋದಿ ಆಡಳಿತದಿಂದ ತಿಳಿಯುತ್ತಿದೆ ಎಂದು ಹೇಳಿದರು.
ಬಿಜೆಪಿ ಕೊಡುಗೆ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಬಿಜೆಪಿಯ ಕೊಡುಗೆ. ಇದೀಗ ಮೈಸೂರು – ಕುಶಾಲನಗರಕ್ಕೂ ಚತುಷ್ಟಥ ರಸ್ತೆಯಾಗಲಿದೆ. ಕುಶಾಲನಗರ-ಮಡಿಕೇರಿ ನಡುವೆ ರಕ್ಷಿತಾರಣ್ಯ ಇರುವುದರಿಂದ ಹೆದ್ದಾರಿ ವಿಸ್ತರಣೆಗೆ ಅಡ್ಡಿಯಾಗಿದೆ ಎಂದು ವಿಷಾದಿಸಿದರು.
ಸಾಧನೆಗಳ ಆಧಾರದಲ್ಲಿ ಚುನಾವಣೆ: ಎಲ್ಲಾ ಭರವಸೆ ಈಡೇರಿಸಿದ ತೖಪ್ತಿ ಬಿಜೆಪಿಯದ್ದು. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ನೀವು ನೀಡಿದ ಯಾವ ಭರವಸೆ ಈಡೇರಿಸಿದ್ದೀರಿ ಹೇಳಿ
ಎಂದು ಕಾಂಗ್ರೆಸ್, ಜೆಡಿಎಸ್’ನ್ನು ಪ್ರಶ್ನಿಸಿದ ಸದಾನಂದಗೌಡ ಅವರು, ಸಾಧನೆಗಳ ಆಧಾರದಲ್ಲಿ ಈ ಬಾರಿಯ ಚುನಾವಣೆಯನ್ನು ಬಿಜೆಪಿ ಸಮರ್ಥವಾಗಿ ಎದುರಿಸಲಿದೆ. ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್’ಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ಗೋಣಿಕೊಪ್ಪಲುವಿನ ಈ ಸಮಾವೇಶ ನಂಬರ್ ಒನ್ ಎಂದು ಶ್ಲಾಘಿಸಿದ ಅವರು, ಈ ರೀತಿಯ ಜನಾರ್ಶೀವಾದ ನಾನು ಹಿಂದೆಂದೂ ಕಂಡಿರಲಿಲ್ಲ. ಎದುರಾಳಿಗಳಿಗೆ ಸಮಾವೇಶ ಭಯ, ಆತಂಕ ಮೂಡಿಸಿದೆ .ಬಿಜೆಪಿಗೆ ಎಲ್ಲೆಡೆ ಜನರು ಮತ್ತೆ ಅಧಿಕಾರ ನೀಡುವ ವಿಶ್ವಾಸ ಮೂಡಿಸಿದೆ. 150 ಸೀಟ್’ಗಳಲ್ಲಿ ಒಂದು ಸ್ಥಾನ ಕೂಡಾ ಕಡಿಮೆಯಿಲ್ಲದಂತೆ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆ.ಎಸ್. ಈಶ್ವರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನಪರಿಷತ್ ಸುಜಾಕುಶಾಲಪ್ಪ, ಪ್ರಮುಖರಾದ ರವಿಕುಶಾಲಪ್ಪ, ರೀನಾ ಪ್ರಕಾಶ್, ನೆಲ್ಲೀರ ಚಲನ್, ಸಿ.ಕೆ.ಬೋಪಣ್ಣ, ಕಿಲನ್ ಗಣಪತಿ, ಬಿ.ಎನ್.ಪ್ರಕಾಶ್, ರಾಜೇಂದ್ರ, ಮನುಮುತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ತಿಮ್ಮಪ್ಪ ಶೆಟ್ಟಿ, ಬಿ.ಬಿ.ಭಾರತೀಶ್, ತಳೂರು ಕಿಶೋರ್ ಕುಮಾರ್, ಸತೀಶ್, ಪ್ರತಾಪ್ ಸಿಂಹ ನಾಯಕ್, ದತ್ತಾತ್ರಿ, ಕಿಶೋರ್, ಮಾದಪ್ಪ, ಅರುಣ್ ಕುಮಾರ್, ವಾಟೇರಿರ ಬೋಪಣ್ಣ, ಪ್ರಸನ್ನ, ಸೇರಿದಂತೆ ಅನೇಕ ಪ್ರಮುಖರು ಸಮಾವೇಶದಲ್ಲಿ ಭಾಗಿಯಾಗಿದ್ದರು.