ದಿಗಂತ ವರದಿ ಬೆಂಗಳೂರು:
ಈ ಬಾರಿಯ ಲೋಕಸಭೆಯ ಚುನಾವಣೆ ಯಾವತ್ತಿಗಿಂತಲೂ ಹೆಚ್ಚು ಮಹತ್ವದ್ದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ತಿಳಿಸಿದರು.
ಶೇಷಾದ್ರಿಪುರದ ಮತಗಟ್ಟೆಯಲ್ಲಿ ಇಂದು ಮತದಾನ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ದೇಶದ ಅಭಿವೃದ್ಧಿಗೆ, ಜಗತ್ತಿನಲ್ಲಿ ಭಾರತದ ಗೌರವಕ್ಕೆ, ಈ ದೇಶದ ಕೋಟ್ಯಂತರ ಜನರ ಜೀವನ ಹಸನಾಗಲು, ಅವರ ಜೀವನ ಉತ್ತಮವಾಗಲು, ಸುಖ ಸಮೃದ್ಧಿ ಹೊಂದಲು ಈ ಚುನಾವಣೆಯ ಫಲಿತಾಂಶ ಮಹತ್ತರವಾದ ಭೂಮಿಕೆಯನ್ನು ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶದ ಪ್ರಜಾತಂತ್ರದಲ್ಲಿ ನಮ್ಮ ಸಂವಿಧಾನದ ಪ್ರಕಾರ ಆಗಾಗ್ಗೆ ಎಲ್ಲ ಹಂತದಲ್ಲಿ ಚುನಾವಣೆಗಳು ನಡೆಯುತ್ತವೆ. ಇವತ್ತು ನಾನು ಬಹಳ ಸಂತೋಷದಿಂದ ಪ್ರತಿವರ್ಷದಂತೆ ಇಲ್ಲಿ ಬಂದು ನನ್ನ ಮತ ಚಲಾಯಿಸಿದ್ದೇನೆ. ನಮ್ಮ ಸಮಾಜದ ಜನರು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕೆಂದು ಸಂಘದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಪ್ರಜಾತಂತ್ರವನ್ನು ಗೆಲ್ಲಿಸಿ; ಭಾರತವನ್ನು ಉಳಿಸಿ ಭಾರತವನ್ನು ಸಮೃದ್ಧಪಡಿಸಿ ಎಂಬ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಎಲ್ಲರೂ ಬೇಗ ಬಂದು ಮತ ಚಲಾಯಿಸಿ ದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.