ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನನ್ನನ್ನು ಸೋಲಿಸುವುದಾಗಿ ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಹೇಳುತ್ತಿದ್ದಾರೆ. ಆದರೆ, ಇದು ಗುಜರಾತ್ ಅಲ್ಲ. ಇಲ್ಲಿಯ ರಾಜಕಾರಣ ಹಾಗೂ ಜನರ ಪ್ರೀತಿ ಎಂಥದ್ದು ಎಂದು ನನಗೆ ಗೊತ್ತಿದೆ. ಹೆಚ್ಚು ಮತಗಳ ಅಂತರದಲ್ಲಿ ಗೆದ್ದು ಬರುವೆ ಎಂದು ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ಪ್ರಚಾರ ಮಾಡಲು ಸೋಮವಾರ ಇಲ್ಲಿಗೆ ಬಂದಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ‘ಕರ್ನಾಟಕದ ರಾಜಕಾರಣ, ಇಲ್ಲಿನ ಬಿಜೆಪಿ ಮತ್ತು ಹುಬ್ಬಳ್ಳಿ ಜನರ ಪ್ರೀತಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಮತದಾರರ ಹೃದಯದಲ್ಲಿ ಭದ್ರವಾಗಿದ್ದೇನೆ. ಹಿಂದಿನ ಯಾವ ಚುನಾವಣೆಗಳಲ್ಲಿಯೂ ಸೋತಿಲ್ಲ. ಎಲ್ಲ ಮತದಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದರು.
ಈಗಾಗಲೇ ನಾನು ಮುಖ್ಯಮಂತ್ರಿಯಾಗಿದ್ದಾನೆ. ಮತ್ತೆ ಸಿ.ಎಂ. ಆಗುವ ಆಸೆ ಇಲ್ಲ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಹೋಗುವೆ. ಬಿಜೆಪಿಯವರು ಗೌರವಯುತವಾಗಿ ನಡೆಸಿಕೊಂಡಿದ್ದರೆ ಪಕ್ಷವನ್ನೇ ಬಿಟ್ಟುಬರುತ್ತಿರಲಿಲ್ಲ. ಬಿಟ್ಟು ಬರುವ ಮನಸ್ಸೂ ಇರಲಿಲ್ಲ. ಬಿಜೆಪಿಯಲ್ಲಿದ್ದಾಗ ಆ ಪಕ್ಷವನ್ನು ಕಟ್ಟಿ ಬೆಳೆಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವೆ ಎಂದರು.