ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ರಾಮನ ಜನ್ಮಸ್ಥಳದಲ್ಲಿ ಅರ್ಚಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಇದುವರೆಗೂ ಮೂರು ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅಯೋಧ್ಯೆಯಲ್ಲಿ ಮುಂದಿನ ವರ್ಷ ಜನವರಿ 22 ರಂದು ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹಾಗಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅರ್ಚಕರ ನೇಮಕ ಸೇರಿದಂತೆ ಇತರೆ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ.
ಪುರೋಹಿತರ ಹುದ್ದೆಗಳಿಗೆ ಸಂದರ್ಶನ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದ ಅರ್ಚಕ ಹುದ್ದೆಯ ಜಾಹೀರಾತಿಗೆ ಪ್ರತಿಕ್ರಿಯೆಯಾಗಿ ಮೂರು ಸಾವಿರ ಅಭ್ಯರ್ಥಿಗಳು ಅರ್ಚಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಟ್ರಸ್ಟ್ಗೆ ಬಂದ 3 ಸಾವಿರ ಅರ್ಜಿದಾರರ ಪೈಕಿ 200 ಮಂದಿಯನ್ನು ಸಂದರ್ಶನಕ್ಕೆ ಅರ್ಹತೆಯ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕರಸೇವಕಪುರಂನಲ್ಲಿ ಅಭ್ಯರ್ಥಿಗಳ ತರಬೇತಿ
ವೃಂದಾವನದ ಪ್ರಮುಖ ಧರ್ಮ ಪ್ರಚಾರಕ ಜಯಕಾಂತ್ ಮಿಶ್ರಾ, ಅಯೋಧ್ಯೆಯ ಇಬ್ಬರು ಮಹಂತರಾದ ಮಿಥಿಲೇಶ್ ನಂದಿನಿ ಸರಣ್ ಮತ್ತು ಸತ್ಯನಾರಾಯಣ ದಾಸ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ದೇವಾಲಯದ ಕರಸೇವಕಪುರದಲ್ಲಿ ಸಂದರ್ಶನ ನಡೆಸುತ್ತಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ. ಸಂದರ್ಶನದ ನಂತರ, ಅಂತಿಮವಾಗಿ ಅರ್ಚಕರ ಹುದ್ದೆಗಳಿಗೆ 20 ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.
ಆರು ತಿಂಗಳ ವಸತಿ ತರಬೇತಿಯ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ರಾಮಜನ್ಮಭೂಮಿ ಸಂಕೀರ್ಣದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ತರಬೇತಿಯ ನಂತರ ಅರ್ಚಕರಿಗೆ ಪ್ರಮಾಣ ಪತ್ರ ನೀಡಿ ಮುಂದೆ ರಾಮ ಮಂದಿರದ ಅರ್ಚಕರ ಹುದ್ದೆಗಳಲ್ಲಿ ಅವರನ್ನು ಬದಲಾಯಿಸಲಾಗುವುದು.
ಅರ್ಚಕರ ಹುದ್ದೆಗಳನ್ನು ಭರ್ತಿ ಮಾಡುವ ಅಭ್ಯರ್ಥಿಗಳಿಗೆ ಉನ್ನತ ಸಂತರು ಸಿದ್ಧಪಡಿಸಿದ ಧಾರ್ಮಿಕ ಪಠ್ಯಕ್ರಮದ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ರೂ.2,000 ಭತ್ಯೆ ಹಾಗೂ ಊಟ-ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಮಾಲಯ ಟ್ರಸ್ಟ್ ವಿವರಿಸಿದೆ.