ಹೊಸದಿಗಂತ ವರದಿ, ಪೊನ್ನಂಪೇಟೆ:
ದಕ್ಷಿಣ ಕೊಡಗಿನ ಅರಣ್ಯದಂಚಿನ ಗ್ರಾಮಗಳಲ್ಲಿ ಜಾನುವಾರಗಳನ್ನು ಬಲಿ ಪಡೆಯುತ್ತಿರುವ ಹಾಗೂ ಜನರಿಗೂ ಆತಂಕ ಸೃಷ್ಟಿಸಿರುವ ಹುಲಿಯನ್ನು ಸೆರೆ ಹಿಡಿಯಲು ಶನಿವಾರದಿಂದ(ಇಂದಿನಿಂದ) ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ಆರಂಭವಾಗಲಿದೆ.
ದಕ್ಷಿಣ ಕೊಡಗಿನ ಅರಣ್ಯ ದಂಚಿನ ಗ್ರಾಮಗಳು ಹಾಗೂ ನೆರೆಯ ಗ್ರಾಮಗಳಲ್ಲಿ ಹುಲಿ ನಿರಂತರವಾಗಿ ಜಾನುವಾರುಗಳನ್ನು ಕಬಳಿಸುತ್ತಿದ್ದು, ಮಾನವನ ಮೇಲೆಯೂ ಹುಲಿ ದಾಳಿ ಮಾಡುವ ಆತಂಕದ ಛಾಯೆ ಜನರಲ್ಲಿ ಮೂಡಿಸಿದೆ.
ಈಗಾಗಲೇ ಶ್ರೀಮಂಗಲ, ಟಿ. ಶೆಟ್ಟಿಗೇರಿ, ಈಸ್ಟ್ ಮತ್ತು ವೆಸ್ಟ್ ನೆಮ್ಮಲೆ, ಕುರ್ಚಿ, ಬೀರುಗ, ಬಾಡಗರಕೇರಿ, ಪರಕಟಕೇರಿ, ತೆರಾಲು ಗ್ರಾಮಗಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ.
ಆದ್ದರಿಂದ ದುಬಾರೆ ಸಾಕಾನೆ ಶಿಬಿರದಿಂದ ಎರಡು ಸಾಕಾನೆಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯ ಗಂಭೀರತೆ ಮನವರಿಕೆ ಮಾಡಿದ ಬೆನ್ನಲ್ಲೇ ಹುಲಿ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ಶಾರ್ಪ್ ಶೂಟರ್ ಗಳು, ಅರವಳಿಕೆ ತಜ್ಞರು ಹಾಗೂ ಪಶುವೈದ್ಯಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯ ಸಿದ್ಧತೆ ಪರಿಶೀಲಿಸಿದ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಮಾಹಿತಿ ನೀಡಿದರು.
ಸ್ಥಳಕ್ಕೆ ಈಗಾಗಲೇ ದುಬಾರೆ ಸಾಕಾನೆ ಶಿಬಿರದಿಂದ ಶ್ರೀರಾಮ ಹಾಗೂ ಗೋಪಿ ಎಂಬ ಎರಡು ಸಾಕಾನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿದೆ. ಅಗತ್ಯವಾದರೆ ನಾಳೆ ಕಾರ್ಯಾಚರಣೆಗೆ ಹೆಚ್ಚಿನ ಸಾಕಾನೆಗಳನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಶನಿವಾರದಿಂದ ಆರಂಭವಾಗುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಚರಣೆ ತಂಡ(ಆರ್. ಆರ್. ಎಫ್) ಕಾಡಾನೆ ಕಾರ್ಯಚರಣೆ ತಂಡ(ಇ. ಎಲ್. ಎಫ್) ಹಾಗೂ ಈ ವ್ಯಾಪ್ತಿಯ ವಿವಿಧ ಅರಣ್ಯ ಇಲಾಖೆಯ ವಿಭಾಗದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.