ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕರಿಬ್ಬರು ಇದ್ದಕ್ಕಿದ್ದಂತೆಯೇ ಶ್ರೀಮಂತರಾಗಲು ತಮ್ಮ ಮಾಲೀಕರ ಮಗಳನ್ನೇ ಕಿಡ್ನ್ಯಾಪ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಕೊರೋನಾ ಕಾಲದಲ್ಲಿ ನಷ್ಟ ಅನುಭವಿಸಿದ ಸರವಣ ಎಂಬಾತ ಬನ್ನೇರುಘಟ್ಟದ ಮಂಜುನಾಥ್ ರೆಡ್ಡಿ ಅವರ ಬಳಿ ಕೆಲಸಕ್ಕೆ ಸೇರಿದ್ದಾನೆ. ಮಂಜುನಾಥ್ ಶ್ರೀಮಂತರು ಸಾಕಷ್ಟು ಹಣವಿದೆ ಎಂದು ತನ್ನ ಸ್ನೇಹಿತ ಪ್ರಶಾಂತ್ ಜೊತೆಸೇರಿ ಪ್ಲ್ಯಾನ್ ಮಾಡಿ ಮಗುವನ್ನು ಕಿಡ್ನ್ಯಾಪ್ ಮಾಡುವ ಐಡಿಯಾ ಹಾಕಿದ್ದಾರೆ.
ಕೋಟಿ ಸಿಗದಿದ್ದರೂ ಮೂವತ್ತು ಲಕ್ಷಕ್ಕೆ ಡಿಮ್ಯಾಂಡ್ ಇಟ್ಟು, ಅದನ್ನು ತೆಗೆದುಕೊಂಡು ಹೋಗಿ ದೂರದಲ್ಲೆಲ್ಲೋ ಸೆಟಲ್ ಆಗುವ ಯೋಚನೆ ಮಾಡಿದ್ದರು. ಮನೆ ಮುಂದೆ ಆಟವಾಡುತ್ತಿದ್ದ ಮಗುವನ್ನು ಇವರಿಬ್ಬರು ಕಿಡ್ನ್ಯಾಪ್ ಮಾಡಿದ್ದಾರೆ. ಮಗುವನ್ನು ಇಬ್ಬರು ಕರೆದುಕೊಂಡು ಹೋಗಿದ್ದನ್ನು ಸ್ಥಳೀಯರು ಗಮನಿಸಿ ಅವರನ್ನು ಫಾಲೋ ಮಾಡಿದ್ದಾರೆ. ಜನರ ಭಯಕ್ಕೆ ಹೆದರಿ ಇಬ್ಬರೂ ಮಗುವನ್ನು ಬೈಕ್ನಿಂದ ಇಳಿಸಿ ಪರಾರಿಯಾಗಿದ್ದಾರೆ.
ಮಂಜುನಾಥ್ಗೆ ಮಗಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದು ಯಾರು ಎಂದು ತಿಳಿದಿರಲಿಲ್ಲ. ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸರವಣನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಗಳ ಕಿಡ್ನ್ಯಾಪ್ ದಿನದಿಂದ ಸರವಣ ಪತ್ತೆಯಿಲ್ಲ ಎಂದು ಹೇಳಿದ್ದಾರೆ. ಸರವಣನ ಸುಳಿವು ಪತ್ತೆ ಹಚ್ಚಿದ ಪೊಲೀಸರಿಗೆ ಆತ ಚಿಕ್ಕಮಗಳೂರಿನ ಮೂಡಿಗೆರೆಯ ಕೃಷ್ಣಪುರದಲ್ಲಿ ಇರುವುದು ತಿಳಿದಿದೆ. ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಸತ್ಯ ಬಾಯ್ಬಿಡಿಸಿದ್ದಾರೆ.