ಹೊಸದಿಗಂತ ವರದಿ, ಶಿವಮೊಗ್ಗ:
ಶ್ರೀರಾಮ ಜನಿಸಿದ ನಾಡಿನಲ್ಲೇ ಹಿಂದುಗಳ ಉತ್ಸವಗಳಿಗೆ ವಿರೋಧ ವ್ಯಕ್ತವಾಗುವುದು ಸರಿಯಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ಬೇಸರ ವ್ಯಕ್ತಪಡಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಆಶೀರ್ವದಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಹಿಂದು ಸರ್ಕಾರ ಇರುವಾಗಲೇ ಹಿಂದುಗಳ ಕಗ್ಗೊಲೆ ಆಗುತ್ತಿರುವುದು ಭಯ ಹುಟ್ಟಿಸುತ್ತಿದೆ. ಹಿಂದುಗಳ ಉತ್ಸವಗಳ ವೇಳೆ ಗಲಭೆ ನಡೆಯುತ್ತಿರುವುದು ಸಖ್ಯವಾದುದ್ದಲ್ಲ. ಹಿಂದು ಸಮಾಜದ ಕಾರ್ಯಕ್ರಮಗಳಿಗೆ ವಿರೋಧ ಮತ್ತು ಆಘಾತ ಆಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರ ಅದರದ್ದೇ ಕ್ರಮ ಕೈಗೊಳ್ಳುತ್ತಿದೆ. ಆದರೂ ಗಲಭೆಗಳನ್ನು ಹತ್ತಿಕ್ಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರದ ಬಗ್ಗೆ ಕಿಡಿಗೇಡಿಗಳಿಗೆ ಭಯವಿಲ್ಲ ಎಂಬ ಭಾವನೆ ಮೂಡುವಂತೆ ಆಗಬಾರದು ಎಂದು ಕಿವಿಮಾತು ಹೇಳಿದರು.