ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 10ರಿಂದ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ರಾಜಭವನದಲ್ಲಿ 11 ಗಂಟೆಗೆ ತಮ್ಮ ಸಂಪುಟ ವಿಸ್ತರಿಸಲು ಮುಂದಾಗಿದ್ದು, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಗೃಹ ಖಾತೆ ಸಿಗುವ ಸಾಧ್ಯತೆಗಳಿವೆ.
ಈಗಾಗಲೇ ಸಂಪುಟ ವಿಸ್ತರಣೆ ಕುರಿತು ಸಿಎಂ ಶಿಂಧೆ ಆದೇಶ ಹೊರಡಿಸಿದ್ದು, ಬಿಜೆಪಿಯ ರಾಧಾ ಕೃಷ್ಣ ವಿಖೆ ಪಾಟಿಲ್. ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಸುಧೀರ್ ಮುಂಗಾತಿವರ್ ಮತ್ತು ತಮ್ಮ ಬಣದ ಉದಯ್ ಸಮಂತ್, ದಾದ ಭುಸೆ, ಸಂದೀಪನ್ ಭುಮ್ರೆ, ಸಂಜಯ್ ಶಿರಸ್ತ್ ಮತ್ತುಗುಲಾಬ್ರಾವ್ ಪಾಟೀಲ್ ಹೊಸ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ.
ನಾಂದೇಡ್ಗೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶಿಂಧೆ, ಇನ್ನೂ ಹೆಸರುಗಳನ್ನು ಅಂತಿಮಗೊಳಿಸಲಾಗಿಲ್ಲ. ಸೋಮವಾರ ರಾತ್ರಿ ಇಲ್ಲವೆ ಮಂಗಳವಾರ ಬೆಳಗ್ಗೆ ಹೆಸರುಗಳನ್ನು ಅಂತಿಮಗೊಳಸಲಾಗುವುದು ಎಂದಿದ್ದಾರೆ.
ಶಿವಸೇನೆಯಲ್ಲಿ ಬಂಡಾಯದಿಂದಾಗಿ ಉದ್ಧವ್ ಠಾಕ್ರೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆ ಕಳೆದ ಜೂನ್ 30ರಂದು ಶಿಂಧೆ ಮುಖ್ಯಮಂತ್ರಿಯಾಗಿ ಮತ್ತು ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.