ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಚಾಲನೆ ನೀಡಿದರು. ಅಷ್ಟೇ ಅಲ್ಲದೆ ಹಲವಾರು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ.
ಬಾಗಿಲಿಗೆ ಸರ್ಕಾರ
‘ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗೆ ಇರಲಿ ನಿಮ್ಮ ಸಹಕಾರ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾಗಿರುವ ‘ಪ್ರಜಾಸೇವಾ ಅಭಿಯಾನ’ವು ಜನರು ತಮ್ಮ ಕೆಲಸಗಳಿಗಾಗಿ ಸರ್ಕಾರೀ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿದೆ ಎಂದರು.
ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಗ್ರಾಮ ಪಂಚಾಯಿತಿ, ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಜನರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ.ಒಂದು ವೇಳೆ ಶಾಸಕರು ಬರದಿದ್ದರೂ ಅಧಿಕಾರಿಗಳು ಪಂಚಾಯಿತಿ ಕೇಂದ್ರಗಳಿಗೆ ಹೋಗಿ ಅಹವಾಲು ಸ್ವೀಕರಿಸಿ ಪರಿಹಾರ ನೀಡಬೇಕು ಅಂದು ಸೂಚನೆ ನೀಡಿದರು.
ಇದನ್ನೂ ಓದಿ:
ಉಚಿತ ವಕೀಲರ ನೆರವು
ಬಡವರು ಹಾಗೂ ಶೋಷಿತರಿಗೆ ಅಗತ್ಯವಿದ್ದರೆ ಕಾನೂನು ಹೋರಾಟಕ್ಕಾಗಿ ಉಚಿತ ವಕೀಲರ ನೆರವು ಒದಗಿಸಲಾಗುವುದು. ಅರ್ಜಿ ತಿರಸ್ಕೃತವಾದರೆ ಕಾರಣವನ್ನೂ ಸ್ಪಷ್ಟಪಡಿಸಲಾಗುವುದು ಎಂದರು.
ಶಿಕ್ಷಕರಿಗೆ ‘Tr’ ಗೌರವ
ಇದೆ ವೇಳೆ ಶಿಕ್ಷಕರಿಗೆ ಗೌರವ ಹೆಚ್ಚಿಸುವ ಉದ್ದೇಶದಿಂದ ವೈದ್ಯರ ಹೆಸರಿನ ಮುಂದೆ ‘Dr’ ಇರುವಂತೆ ಶಿಕ್ಷಕರ ಹೆಸರಿನ ಮುಂದೆಯೂ ‘Tr’ ಎಂದು ಗೌರವಾರ್ಥವಾಗಿ ಸಂಬೋಧಿಸುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು. ಜತೆಗೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.7ರಷ್ಟು ಆಂತರಿಕ ಮೀಸಲಾತಿ ನೀಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದರು.
ಬರಪೀಡಿತ ತಾಲೂಕುಗಳ ಕುರಿತು ಮಾತನಾಡಿದ ಡಿಕೆಶಿ, ಈಗಾಗಲೇ 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಶೀಘ್ರದಲ್ಲೇ ಎರಡನೇ ಪಟ್ಟಿಯಲ್ಲಿ 50ಕ್ಕೂ ಹೆಚ್ಚು ತಾಲೂಕುಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.



