ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಭಯ ರಾಜ್ಯಗಳ ನಡುವಿನ ಗಡಿ ಸಮಸ್ಯೆ ಆನೆಗೆ ಕುತ್ತಾಗಿ ಪರಿಣಮಿಸಿದೆ. ತಮಿಳುನಾಡು-ಕೇರಳ ಗಡಿಯಲ್ಲಿರುವ ಆನೈಕಟ್ಟಿ ನದಿ ಪ್ರದೇಶದಲ್ಲಿ ಆನೆಯೊಂದು ಓಡಾಡುತ್ತಿದ್ದು, ಯಾವ ರಾಜ್ಯದವರು ಚಿಕಿತ್ಸೆ ನೀಡಬೇಕು ಎಂದು ತಿಳಿಯದೆ ಎರಡೂ ರಾಜ್ಯಗಳ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಕೆಲ ದಿನಗಳಿಂದ ಆನೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಸೋತು ಸೊರಗಿದೆ. ನಿಲ್ಲುವುದೂ ಕಷ್ಟವಾಗಿ ಆನೈಕಟ್ಟಿಯ ಸಣ್ಣ ನದಿಯ ಬಳಿ ಆನೆ ಪ್ರಜ್ಞೆ ತಪ್ಪಿ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಆನೆಯ ಓಡಾಟ ಅಧಿಕಾರಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಏಕೆಂದರೆ ಈ ಪ್ರದೇಶವು ತಮಿಳುನಾಡು-ಕೇರಳ ಗಡಿಯಲ್ಲಿದೆ. ಆನೆ ಒಮ್ಮೆ ತಮಿಳುನಾಡು ಕಡೆಗೆ ಮತ್ತೊಮ್ಮೆ ಕೇರಳದ ಕಡೆಗೆ ಹೋಗುತ್ತಿದೆ. ಇದರಿಂದ ಎರಡೂ ರಾಜ್ಯಗಳ ಅಧಿಕಾರಿಗಳು ಆನೆಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿ, ಜವಾಬ್ದಾರಿಯಿಂದ ವರ್ತಿಸಿದ್ದಾರೆ.
ಅಧಿಕಾರಿಗಳ ವರ್ತನೆಗೆ ಕೋಪಗೊಂಡ ಪ್ರಾಣಿ ದಯಾ ಸಂಘಟನೆಗಳ ಪ್ರತಿನಿಧಿಗಳು ಯಾವುದೋ ಒಂದು ರಾಜ್ಯದ ಅಧಿಕಾರಿಗಳು ಮೊದಲು ಆನೆಗೆ ಚಿಕಿತ್ಸೆ ನೀಡಿ ಎಂದು ಆಗ್ರಹಿಸಿದ್ದಾರೆ. ಇದೀಗ ಪ್ರಸ್ತುತ ಎರಡೂ ರಾಜ್ಯದ ಅಧಿಕಾರಿಗಳು ಆನೆಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಈ ಕೆಲಸ ಮೊದಲೇ ಮಾಡಿದ್ದರೆ, ಆನೆ ಇಷ್ಟೊಂದು ಬಸವಳಿಯುತ್ತಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.