ಹೊಸದಿಗಂತ ವರದಿ, ಬಳ್ಳಾರಿ:
ಗಣಿನಾಡು ಬಳ್ಳಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಆಗಮಿಸಿದ್ದು, ಜಿಲ್ಲೆಯ 5 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ನಗರದ ಹೊರವಲಯದ ಸತ್ಯಂ ಕಾಲೇಜು ಬಳಿಯ ಮೈದಾನದಲ್ಲಿ ಆಯೋಜಿಸಿದ್ದ ನವ ಕರ್ನಾಟಕ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಪ್ರಾರಂಭದಲ್ಲಿ ಬಜರಂಗಿ, ಶ್ರೀ ಆಂಜಿನೆಯನನ್ನು ಪ್ರಸ್ತಾಪಿಸಿ ನೆರೆದ ಲಕ್ಷಾಂತರ ಜನರನ್ನು ಆಕರ್ಷಿಸಿದರು. ಜೈ ಬಜರಂಗಿ, ಜೈ ಬಜರಂಗ ಬಲಿ ಕೀ… ಎನ್ನುತ್ತಲೇ ನೆರೆದ ಸಾವಿರಾರು ಯುವಕರಲ್ಲಿ ಅತ್ತ್ಯುತ್ಸಾಹ ಏರುವಂತೆ ಮಾಡಿ ಗಮನಸೆಳೆದರು.
ಶ್ರೀ ಆಂಜಿನೇಯ ಸ್ವಾಮೀ ಪುಣ್ಯ ಭೂಮಿ ಇದು, ಆಂಜನೇಯ ಸ್ವಾಮೀ ನೆಲದಲ್ಲಿ ಇಲ್ಲಿ ಆಂಜಿನೇಯ ಶ್ರೀ ಹುಲಿಕುಂಟೆರಾಯ ಸ್ವಾಮೀಯ ರೂಪದಲ್ಲಿದ್ದಾನೆ, ಈತನಿಗೆ ಶಿರಬಾಗಿ ನಮಸ್ಕರಿಸುವೆ ಎಂದು ಮಾತು ಪ್ರಾರಂಭಿಸಿದ ಕೂಡಲೇ ನೆರೆದ ಸಾವಿರಾರು ಜನರು ಮೋದಿ, ಮೋದಿ,ಮೋದಿ ಎನ್ನುವ ಜೈಕಾರ ಮೊಳಗಿಸಿದರು. ಇದನ್ನು ಕಂಡು ಮೋದಿ ಅವರು ಇಲ್ಲಿ ನೆರೆದ ಜನಸಾಗರವನ್ನು ನೋಡಿದರೆ ಬಿಜೆಪಿಯ ಕಮಲ ಜಿಲ್ಲೆಯಷ್ಟೆ ಅಲ್ಲ, ಇಡೀ ರಾಜ್ಯದಲ್ಲಿ ಅರಳುವ ಸಂಕೇತ ಇದಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಭ್ರ ಷ್ಟಾಚಾರ ವನ್ನೇ ಮೂಲ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಹೆಚ್ಚು ಅವಧಿಯಲ್ಲಿ ಆಳಿದ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ, ಇತ್ತೀಚೆಗೆ ಕಾಂಗ್ರೆಸ್ ಗೆ ಇನ್ನೊಂದು ದೊಡ್ಡ ರೋಗ ಅಂಟಿಕೊಂಡಿದೆ, ಹಣ ಬಲದಲ್ಲಿರುವ ಕಾಂಗ್ರೆಸ್ ಜನರಲ್ಲಿ ಸುಳ್ಳು ಹೇಳುವ ಮೂಲಕ ವಿಷಬೀಜ ಬಿತ್ತುತ್ತಿದೆ. ಅನೇಕ ಚುನಾವಣೆಯಲ್ಲಿ ಕಾಂಗ್ರೆಸ್ ಇದನ್ನೇ ಮಾಡಿಕೊಂಡು ಬಂದಿದೆ, ಬೇಸತ್ತ ದೇಶದ ಜನರು ಕಮಲ ಅರಳಿಸಲು ಮುಂದಾಗಿದ್ದು, ಇದನ್ನು ನೋಡಿ ಕಾಂಗ್ರೆಸ್ ಗೆ ನಡುಕ ಶುರುವಾಗಿದೆ ಎಂದು ಮೋದಿ ಅವರು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಜಿ.ಸೋಮಶೇಖರ್ ರೆಡ್ಡಿ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ, ಸಚಿವ ಬಿ.ಶ್ರೀರಾಮುಲು, ಸಿರುಗುಪ್ಪ ಕ್ಷೇತ್ರದ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ, ಸಂಡೂರು ಕ್ಷೇತ್ರದ ಶಿಲ್ಪ ರಾಘವೇಂದ್ರ, ಕಂಪ್ಲಿ ಕ್ಷೇತ್ರದ ಟಿ.ಎಚ್.ಸುರೇಶ್ ಬಾಬು ಅವರನ್ನು ಅಭಿವೃದ್ಧಿ ನಿರೀಕ್ಷಿಸಿ ಪ್ರತಿಯೋಬ್ಬರೂ ಬಿಜೆಪಿ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ರೈತ ಮೊರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಸಚ್ಚಿದಾನಂದ ಮೂರ್ತಿ, ಕೆ.ಅಶೋಕ್, ಸೇರಿದಂತೆ ಇತರರಿದ್ದರು.