ಕಾಯಕ ರೂಪದಲ್ಲಿ ತ್ರಿವಿಧ ದಾಸೋಹ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಅನ್ನ, ಆಶ್ರಯ ಹಾಗೂ ಅಕ್ಷರವೆಂಬ ತ್ರಿವಿಧ ದಾಸೋಹವನ್ನು ಸರಕಾರ ಕಾಯಕ ರೂಪದಲ್ಲಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತುಮಕೂರಿನ ಸಿದ್ದಗಂಗಾಮಠದಲ್ಲಿ ‘ ದಾಸೋಹ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿದ್ದಗಂಗಾ ಮಠ ದಾಸೋಹದ ಬಹಳ ದೊಡ್ಡ ಪರಂಪರೆಯನ್ನೇ ಕರ್ನಾಟಕದಲ್ಲಿ ಹುಟ್ಟುಹಾಕಿದೆ. ಜಗಜ್ಯೋತಿ ಬಸವೇಶ್ವರರ ಮಾರ್ಗದರ್ಶನವನ್ನು ಅಕ್ಷರಶಃ ಪಾಲಿಸಿದವರು ಶ್ರೀಶಿವಕುಮಾರಸ್ವಾಮಿಗಳು. ದಾಸೋಹ ದಿನವನ್ನು ಸಿದ್ದಗಂಗಾ ಮಠದಲ್ಲಿ ಆಚರಣೆ ಮಾಡಬೇಕೆಂದು ಸರಕಾರ ತೀರ್ಮಾನಿಸಿದೆ. ನಮ್ಮ ಸರಕಾರವೂ ಅದೇ ದಾರಿಯಲ್ಲಿ ನಡೆಯುತ್ತಿದೆ. 4 ಕೆ.ಜಿ ನೀಡಲಾಗುತ್ತಿದ್ದ ಅಕ್ಕಿಯನ್ನು 5 ಕೆ.ಜಿ.ಗೆ ಹೆಚ್ಚಿಸಿದೆ. ಜಿಲ್ಲೆಗಳ ಆಹಾರ ಪದ್ಧತಿ ಅನುಗುಣವಾಗಿ ರಾಗಿ, ಜೋಳ ಇತ್ಯಾದಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ವಿದ್ಯಾ ದಾಸೋಹವನ್ನೂ ಸರಕಾರ ಕೈಗೊಂಡಿದ್ದು, ಕಾರ್ಮಿಕರ ಹಾಗೂ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ. 5 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ವಾರಾಂತ್ಯ ಕರ್ಫ್ಯೂ ಇಂದು ತೀರ್ಮಾನ:
ವಾರಾಂತ್ಯ ಕರ್ಫ್ಯೂ ಕುರಿತಂತೆ ಇಂದು ತಜ್ಞರೊಂದಿಗೆ ಸಭೆ ನಡೆಯಲಿದ್ದು, ಅವರ ಅಭಿಪ್ರಾಯ ಪಡೆಯಲಾಗುವುದು. ಹಲವಾರು ಸಂಘ ಸಂಸ್ಥೆಗಳು, ಶಾಸಕರು ಮತ್ತು ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ವಿಶೇಷವಾಗಿ ತಜ್ಞರ ವರದಿ, ಅಭಿಪ್ರಾಯ ಪಡೆಯಲಾಗುವುದು. ಮುಂಬರುವ ದಿನಗಳಲ್ಲಿ ಮೂರನೇ ಅಲೆಯ ರೂಪಾಂತರ ಯಾವ ರೀತಿಯಲ್ಲಿ ಆಗಬಹುದೆಂಬ ಬಗ್ಗೆ ಚರ್ಚಿಸಿ, ಎಲ್ಲಾ ಆಯಾಮಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!