ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮಾಕ್ಷಿಪಾಳ್ಯದ ಕೊಟ್ಟಿಗೆ ಪಾಳ್ಯದಲ್ಲಿರುವ ಗಣೇಶ ದೇವಸ್ಥಾನದ ಬಳಿಯಿರುವ ಮನೆಯೊಂದರಲ್ಲಿ ಬೆಳ್ಳಂಬೆಳಗ್ಗೆ ರಕ್ತದ ಕೋಡಿ ಹರಿದಿದೆ.
ವ್ಯಕ್ತಿಯೊಬ್ಬ ತನ್ನ ತಾಯಿ, ಅಜ್ಜಿ, ಮಾವನನ್ನು ಕೊಲೆ ಮಾಡಿ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳಮ್ಮ, ನಂಜಮ್ಮ, ಸತೀಶ್ ಹಾಗೂ ಆರೋಪಿ ಪ್ರಶಾಂತ್ ಮೃತರು.
ಕುಟುಂಬದವರು ಎಂಟು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಿದ್ದರು. ಆರೋಪಿ ಪ್ರಶಾಂತ್ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ. ಆದರೆ ಕಳೆದ ಒಂದು ವರ್ಷದಿಂದ ಆತ ಕೆಲಸಕ್ಕೇ ಹೋಗಿರಲಿಲ್ಲ. ಇಂದು ತಂದೆ ಕೆಲಸಕ್ಕೆ ಹೋದ ವೇಳೆ ಮಚ್ಚಿನಲ್ಲಿ ಏಕಾಏಕಿ ಎಲ್ಲರನ್ನೂ ಕೊಲೆ ಮಾಡಿದ್ದಾನೆ.
ಮನೆಯ ಮುಖ್ಯದ್ವಾರದಲ್ಲಿ ಅಜ್ಜಿ ಹಾಗೂ ಅಮ್ಮನನ್ನು ಕೊಲೆ ಮಾಡಿ, ಮಾವನನ್ನು ರೂಮಿನಲ್ಲಿ ಕೊಂದಿದ್ದಾನೆ. ನಂತರ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಮನೆಯ ಓನರ್ ಮನೆಯ ಮುಖ್ಯದ್ವಾರವನ್ನು ಲಾಕ್ ಮಾಡಿದ್ದಾರೆ. ಮನೆಯ ಒಳಗೇ ಇದ್ದ ಆರೋಪಿ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಕೊಲೆ ನಿಖರ ಕಾರಣ ಏನು ಎನ್ನೋದು ತನಿಖೆಯಲ್ಲಿ ಹೊರಬರಬೇಕಿದೆ.



