ಲಾರಿ-ಕಾರು ನಡುವೆ ಅಪಘಾತ: ಇಬ್ಬರ ದುರ್ಮರಣ

ಹೊಸದಿಗಂತ ವರದಿ ಮಂಡ್ಯ:

ಲಾರಿ ಮತ್ತು ಕಾರು ನಡುವೆ ಅಪಘಾತ ನಡೆದು ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಗೆಜ್ಜಲಗೆರೆ ಬಳಿ ಇಂದು ಮುಂಜಾನೆ ನಡೆದಿದೆ.

ಮಂಡ್ಯದ ಗುತ್ತಲು ಬಡಾವಣೆಯ ಕಾರು ಚಾಲಕ ಶಾಕಿಬ್ (25) ಆಗೂ ಸದ್ದಾಂ ಷರೀಪ್ (23) ಮೃತ ದುರ್ದೈವಿಗಳಾಗಿದ್ದು, ನಸೀರಾ (24), ನಿಖತ್ (20) ಹಾಗೂ ಜಹೀಬ್ (36) ಅವರುಗಳು ಗಾಯಗೊಂಡಿದ್ದಾರೆ.
ಸದ್ದಾಂಷರೀಫ್ ಇತರರು ಸಂಬಂಧಿಕರ ಬೀಗರ ಔತಣ ಕೂಟಕ್ಕೆಂದು ಬೆಂಗಳೂರಿಗೆ ಹೋಗಿ ವಾಪಸ್ಸು ಕಾರಿನಲ್ಲಿ ಮಂಡ್ಯಕ್ಕೆ ಬರುತ್ತಿದ್ದರು. ಅತಿ ವೇಗವಾಗಿ ಹೋಗುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

ತೀವ್ರವಾಗಿ ಗಾಯಗೊಂಡ ಕಾರು ಚಾಲಕ ಶಾಕೀಬ್ ಮತ್ತು ಸದ್ದಾಂ ಷರೀಫ್ ಅವರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಸದ್ದಾಂ ಅವರು ಮಂಡ್ಯ ನಗರದ ಗುತ್ತಲು ಬಡಾವಣೆಯ ಪತ್ರಿಕೆ ವಿತರಕ ಕಲೀಂ ಷರೀಫ್ ಅವರ ಪುತ್ರನಾಗಿದ್ದಾನೆ. ಕಲೀಂ ಷರೀಫ್ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದ್ದರಿಂದ ಸದ್ದಾಂ ಅವರೇ ಮನೆಮನೆಗೆ ಪತ್ರಿಕೆಗಳ ವಿತರಣೆ ನೋಡಿಕೊಳ್ಳುತ್ತಿದ್ದರು.

ಪತ್ರಿಕೆಗಳನ್ನು ವಿತರಣೆ ಮಾಡುವ ಸಲುವಾಗಿಯೇ ಮಧ್ಯರಾತ್ರಿ ಬೆಂಗಳೂರಿನಿಂದ ಮಂಡ್ಯಗೆ ಹೊರಟಿದ್ದರು. ಅಪಘಾತದಲ್ಲಿ ಮಗ ಸತ್ತಿರುವ ಸುದ್ದಿ ತಿಳಿದ ಬಳಿಕವೂ ಕಲೀಂ ಷರೀಫ್ ಅವರು ಖುದ್ದು ತಾವೇ ಹೋಗಿ 600ಕ್ಕೂ ಹೆಚ್ಚು ಪತ್ರಿಕೆಗಳನ್ನು ವಿತರಣೆ ಮಾಡಿ, ವೃತ್ತಪರತೆ ಪ್ರದರ್ಶಿದ್ದಾರೆ. ಘಟನೆ ಸಂಬಂಧ ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!