ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವ್ಯಾಪಿಯಾಗಿ ಚರ್ಚೆಯಾಗಿರೋ ಹಿಂಡೆನ್ಬರ್ಗ್-ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ವಿವರವಾಗಿ ಪರಿಶೀಲನೆ ನಡೆಸಲು ಸುಪ್ರಿಂ ಕೋರ್ಟ್ 6 ಜನರ ತನಿಖಾ ಸಮಿತಿಯೊಂದನ್ನು ರಚಿಸಿದ್ದು ಎರಡು ತಿಂಗಳಲ್ಲಿ ಅದಾನಿ ಸಮೂಹದ ಮೇಲಿನ ಮಾರುಕಟ್ಟೆ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ಅಧ್ಯಯನ ವರದಿ ಸಲ್ಲಿಸುವಂತೆ ಹೇಳಿದೆ. ಸುಪ್ರಿಂ ಕೋರ್ಟ್ನ ಈ ತೀರ್ಪನ್ನು ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಸ್ವಾಗತಿಸಿದ್ದಾರೆ.
ಈಕುರಿತು ಟ್ವೀಟ್ ಮಾಡಿರುವ ಗೌತಮ್ ಅದಾನಿ “ಗೌರವಾನ್ವಿತ ಸುಪ್ರೀಂ ಕೋರ್ಟ್ನ ಆದೇಶವನ್ನು ಅದಾನಿ ಗ್ರೂಪ್ ಸ್ವಾಗತಿಸುತ್ತದೆ. ಇದು ಕಾಲಮಿತಿಯಲ್ಲಿ ಅಂತಿಮಗೊಳ್ಳಲಿದೆ. ಸತ್ಯ ಯಾವಾಗಲೂ ಗೆಲ್ಲುತ್ತದೆ” ಎಂದು ಬರೆದುಕೊಂಡಿದ್ದಾರೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ ಎಂ ಸಪ್ರೆ ನೇತೃತ್ವದ ಸಮಿತಿಯು ಹಿಂಡೆನ್ಬರ್ಗ್ ರಿಸರ್ಚ್ ವರದಿಯ ಆರೋಪಗಳಿಗೆ ಸಂಬಂಧಿಸಿದಂತೆ ಒಟ್ಟಾರೆಯಾಗಿ ಪರಿಶೀಲನೆ ನಡೆಸಲಿದೆ. ಮಾಜಿ ನ್ಯಾಯಾಧೀಶರಾದ ಒಪಿ ಭಟ್ ಮತ್ತು ಜೆಪಿ ದೇವದತ್ ಕೂಡ ತನಿಖಾ ಸಮಿತಿಯ ಭಾಗವಾಗಿದ್ದಾರೆ. ನ್ಯಾಯಾಲಯವು ನಂದನ್ ನಿಲೇಕಣಿ, ಕೆವಿ ಕಾಮತ್ ಮತ್ತು ಸೋಮಶೇಖರನ್ ಸುಂದರೇಶನ್ ಅವರನ್ನು ಸಮಿತಿಯ ಇತರ ಮೂವರು ಸದಸ್ಯರನ್ನಾಗಿ ಹೆಸರಿಸಿದೆ.