ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ತುಮಕೂರಿಗೆ ಅಗ್ರಸ್ಥಾನ: ಶಾಸಕ ಜಿ.ಬಿ ಜ್ಯೋತಿಗಣೇಶ್

ಹೊಸದಿಗಂತ ವರದಿ ತುಮಕೂರು:
ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದಲ್ಲಿ ದೇಶದಲ್ಲಿಯೇ ಏಳನೇ ಹಾಗೂ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿರುವ ತುಮಕೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದುನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.

ಸ್ಮಾರ್ಟ್ ಸಿಟಿ ಮಿಷನ್ ನ 7ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಗರದ ಆಲದಮರದ ಪಾರ್ಕ್‌ನಲ್ಲಿ ಸ್ಮಾರ್ಟ್ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಒಟ್ಟು 178 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು ಅದರಲ್ಲಿ 128ಕ್ಕೂ ಹೆಚ್ಚು ಕಾಮಗಾರಿಗಳು ಪೂರ್ಣಗೊಂಡಿವೆ ಎಂದರಲ್ಲದೇ ಇನ್ನೂ 50 ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಗಳ ಮೂಲಕ ನಗರದ ಚಿತ್ರಣವೇ ಬದಲಾಗಿದ್ದು, 800 ಕೋಟಿ.ರೂಗಳ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಎಂದರು. ಮಹಾತ್ಮಗಾಂಧೀ ಕ್ರೀಡಾಂಗಣ, ಪಾಲಿಕೆ ಕಟ್ಟಡ, ಎಂಪ್ರೆಸ್ ಆವರಣದಲ್ಲಿ ಆಡಿಟೋರಿಯಂ, ರಿಂಗ್ ರಸ್ತೆ ಅಭಿವೃದ್ಧಿ, ಮಾರಿಯಮ್ಮ ನಗರದಲ್ಲಿ ಪುನರ್ವಸತಿ, ಅಮಾನಿಕೆರೆಯ ಸಮಗ್ರ ಅಭಿವೃದ್ಧಿ , ತುಮಕೂರು ನಗರದ ನೀರಿನ ಬವಣೆಯನ್ನು ನೀಗಿಸುವುದರಲ್ಲಿ ಸ್ಮಾರ್ಟ್ ಸಿಟಿಯ ಕೊಡುಗೆ ಅಪಾರ ಎಂದರು.

ತುಮಕೂರಿನ 35 ವಾರ್ಡುಗಳ ಸುಮಾರು 60ಕ್ಕೂ ಹೆಚ್ಚು ಪಾರ್ಕುಗಳಿಗಾಗಿ 30 ಕೋಟಿಗೂ ಹಣವನ್ನು ವ್ಯಯಿಸಲಾಗಿದೆಯಲ್ಲದೇ ಜ್ಯೂನಿಯರ್ ಕಾಲೇಜಿನಲ್ಲಿ ನೂತನ ಕಟ್ಟಡಗಳಿಗೆ ಅನುದಾನವನ್ನು ಒದಗಿಸಲಾಗಿದೆ.ನಗರದ ಜನರ ಆರೋಗ್ಯ ರಕ್ಷಣೆಗಾಗಿ ಸ್ಮಾರ್ಟ್ ಸಿಟಿ ವತಿಯಿಂದ ಟ್ರಾಮಾ ಕೇರ್ ಸೆಂಟರ್, ವಿವಿಧ ಆರೋಗ್ಯ ಕೇಂದ್ರಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಗರದ ಹೃದಯ ಭಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಗ್ರಂಥಾಲಯ, ಬಸ್ ನಿಲ್ದಾಣದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ನಗರದ ಅಲ್ಲಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ವೆಂಡರ್ ಜೋನ್ , ಕಳ್ಳತನ ಸೇರಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಕಮಾಂಡ್ ಸೆಂಟರ್ ಗಳನ್ನು ಸ್ಥಾಪಿಸಲಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದ ಅವರು ನಗರದ ಸರ್ವತೋಮುಖ ಅಭಿವೃದ್ಧಿಗೆ ನಾಗರೀಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಸಂಸದ ಜಿ.ಎಸ್ ಬಸವರಾಜು ಮಾತನಾಡಿ ಸಿಟಿ ಸ್ಮಾರ್ಟ್ ಆಗಬೇಕಾದರೇ ನಾಗರೀಕರು ಸಹ ಸ್ಮಾರ್ಟ್ ಆಗಬೇಕು.ನಗರ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಜನರ ಮೇಲಿದೆ ಎಂದರಲ್ಲದೇ ಅತ್ಯಧಿಕ ಆಮ್ಲಜನಕವನ್ನು ನೀಡುವ ಅರಳಿ,ಬೇವು ಸೇರಿದಂತೆ ಅನೇಕ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು ಎಂದರು.ನಗರಗಳಂತೆ ಹಳ್ಳಿಗಳು ಸ್ಮಾರ್ಟ್ ಆಗಬೇಕೆಂಬುದು ಕೇಂದ್ರ ಸರ್ಕಾರದ ಅಭಿಲಾಷೆಯಾಗಿದ್ದು ಅದಕ್ಕಾಗಿ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತಂದು ಹಳ್ಳಿಗಳ ಸಮಗ್ರ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಎಸ್.ಎಸ್ ಪುರಂನ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಗಿಡಗಳನ್ನು ನೆಡಲಾಯಿತಲ್ಲದೇ ಉಪ್ಪಾರಹಳ್ಳಿ ಮೆಲ್ಸೇತುವೆಯ ಸೌಂದರ್ಯಕರಣಕ್ಕಾಗಿ ಬಣ್ಣ ಬಳಿಯುವ ಕೆಲಸಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮೆಯರ್ ಬಿ.ಜಿ ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಮಂಜುಳಾ ಆದರ್ಶ್, ಗಿರಿಜಾ ಧನಿಯಕುಮಾರ್, ಸಿ.ಎನ್ ರಮೇಶ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ ರಂಗಸ್ವಾಮಿ ಪ್ರೆಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ನಾಗರೀಕರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!