ಹೊಸದಿಗಂತ ವರದಿ ಕುಶಾಲನಗರ :
ಮೀನು ಹಿಡಿಯಲೆಂದು ತೆರಳಿದ ಇಬ್ಬರು ಮಕ್ಕಳು ಕಾವೇರಿ ನದಿಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಭಾನುವಾರ ಇಲ್ಲಿಗೆ ಸಮೀಪದ ಕೂಡ್ಲೂರುವಿನಲ್ಲಿ ನಡೆದಿದೆ.
ಕೂಡ್ಲೂರು ಗ್ರಾಮದ ಕೂಲಿ ಕಾರ್ಮಿಕ ನಾಗರಾಜ್ ಎಂಬವರ ಪುತ್ರ ಪೃಥ್ವಿ (7) ಹಾಗೂ ಆಟೋ ಚಾಲಕ ಸತೀಶ್ ಎಂಬವ ಪುತ್ರ ಪ್ರಜ್ವಲ್ (4) ಮೃತ ಬಾಲಕರು.
ಮೃತ ಬಾಲಕರು ಸಂಬಂಧದಲ್ಲಿ ಸಹೋದರರೂ ಆಗಿರುವರೆನ್ನಲಾಗಿದೆ. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಮಾವಿನ ತೋಪು ಸಮೀಪದ ಏತ ನೀರಾವರಿ ಘಟಕದ ಬಳಿ ಇವರಿಬ್ಬರೂ ಮೀನು ಹಿಡಿಯಲೆಂದು ನದಿಗೆ ಇಳಿದಾಗ,ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.