ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೂಲಿ ಕಾರ್ಮಿಕರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿಯ ಸಮೀಪ ಕುರುವಳ್ಳಿಯ ಪುತ್ತಿಗೆ ಮಠದ ಸಮೀಪದ ವಿಶ್ವಕರ್ಮ ಸಮುದಾಯ ಭವನದೊಳಗೆ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಮಂಜಪ್ಪ (45) ಬೀರಪ್ಪ (46) ಹತ್ಯೆಗೀಡಾದ ಕಾರ್ಮಿಕರು.
ಹತ್ಯೆಗೊಳಗಾದವರು ದಾವಣಗೆರೆ ಮೂಲದ ಕಾರ್ಮಿಕರು ಎನ್ನಲಾಗುತ್ತಿದ್ದು, ರಾತ್ರಿ ಕುಡಿದು ಹಣದ ವ್ಯವಹಾರ ಮಾಡುವ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಘಟನೆ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.