ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಮತ್ತು ಉದ್ಧವ್ ಠಾಕ್ರೆ ನಡುವಿನ ಸಮರ ದಿನ ದಿನ ನಾನಾ ರೂಪ ಪಡೆಯುತ್ತಿದ್ದು, ಇದೀಗ ವಿಪ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂದೆ ವಿಪ್ನ್ನು ಶಿವಸೇನೆಯ ವಿಪ್ ಎಂದು ಹೊಸದಾಗಿ ನೇಮಕಗೊಂಡ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಮಾನ್ಯತೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಶಿವಸೇನೆ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಗುಂಪು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಉದ್ಧವ್ ಠಾಕ್ರೆ ಶಿವಸೇನೆ ಪಕ್ಷದ ಮುಖ್ಯಸ್ಥರಾಗಿಯೇ ಇದ್ದಾರೆ. ಶಿಂದೆ ನಾಮನಿರ್ದೇಶನ ಮಾಡಿದ ವಿಪ್ಗೆ ಮಾನ್ಯತೆ ನೀಡಲು ಹೊಸದಾಗಿ ನೇಮಕಗೊಂಡ ಸ್ಪೀಕರ್ಗೆ ಅಧಿಕಾರವಿಲ್ಲ ಎಂದು ಠಾಕ್ರೆ ಪರಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪೀಠಕ್ಕೆ ತಿಳಿಸಿದರು.
ವಿಪ್ಗಳನ್ನು ಅಂಗೀಕರಿಸಲು ಸ್ಪೀಕರ್ಗೆ ಅಧಿಕಾರವಿಲ್ಲ. ಇದು ಈ ನ್ಯಾಯಾಲಯದ ವಿಚಾರಣೆಯ ಯಥಾಸ್ಥಿತಿಯನ್ನು ಬದಲಾಯಿಸುತ್ತಿದೆ. ಭಾನುವಾರ ಮಧ್ಯರಾತ್ರಿಯ ವೇಳೆಗೆ ಸ್ಪೀಕರ್ ವಿಪ್ ಅಂಗೀಕಾರ ಮಾಡಿದ್ದಾರೆ ಎಂದು ಸಿಂಘ್ವಿ ತುರ್ತು ವಿಚಾರಣೆಗೆ ವಿಷಯವನ್ನು ಪ್ರಸ್ತಾಪಿಸುವಾಗ ಹೇಳಿದರು. ಬಾಕಿ ಉಳಿದಿರುವ ಅರ್ಜಿಗಳ ಜೊತೆಗೆ ಜುಲೈ 11ಕ್ಕೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.