ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಡಿಯೋ ವಿವಾದದ ಕುರಿತು ಮಾತನಾಡಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ. ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ಆಗುವಂತೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನೋಡಿಕೊಳ್ಳುತ್ತೇನೆ. ಒಬ್ಬ ಮಹಿಳೆಯಾಗಿ ಯಾವುದೇ ಹೆಣ್ಣು ಮಕ್ಕಳ ಮೇಲೆ ಅನ್ಯಾಯವಾದರೂ ಸಹಿಸಲು ಸಾಧ್ಯವಿಲ್ಲ. ವಿದ್ಯಾರ್ಥಿನಿಯರ ಭವಿಷ್ಯದ ಪ್ರಶ್ನೆ ಇದೆ, ತನಿಖೆ ಆಗುವವರೆಗೂ ಕಾಯಿರಿ. ಖುಷ್ಬು ಅವರು ಬಂದು ಏನು ಹೇಳಿದ್ದಾರೆ ಎಲ್ಲರಿಗೂ ಗೊತ್ತು, ಅವರದೇ ಪಕ್ಷದವರು ಬಂದು ಹುರುಳಿಲ್ಲ ಎಂದು ಹೇಳಿದ್ದಾರೆ ಎಂದರು.
ಪ್ರತಿಭಟನಾಕಾರರ ಮೇಲೆ ಕೇಸ್ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ತಪ್ಪು ಮಾತನಾಡಿದ್ದಾರೆ ಅದಕ್ಕೆ ಕೇಸ್ ಆಗಿದೆ, ಪ್ರತಿಭಟನೆ ಮಾಡುವುದು ತಪ್ಪಲ್ಲ, ಪ್ರತಿಭಟನೆಯಲ್ಲಿ ಯಾವ ರೀತಿ ಮಾತನಾಡಿದ್ದಾರೆ ಅದು ತಪ್ಪು. ಪ್ರಚೋದನಕಾರಿಯಾಗಿ ಮಾತನಾಡುವುದು ತಪ್ಪು ಈ ಬಗ್ಗೆ ಎಸ್ಪಿ ಜೊತೆಗೂ ಮಾತನಾಡಿದ್ದೇನೆ, ಎಲ್ಲಾ ಜಾತಿ ಧರ್ಮದವರು ಒಟ್ಟಿಗೆ ಇರೋಣ. ಬಿಜೆಪಿಯವರೇ ರಾಮ ರಾಜ್ಯದ ಪರಿಕಲ್ಪನೆ ಹೇಳುತ್ತಾರೆ, ರಾಮ ರಾಜ್ಯದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಇರಬೇಕು ಅನ್ನುವುದು ಕಾಂಗ್ರೆಸ್ ನ ಸಿದ್ದಾಂತ ಎಂದರು.