ಹೊಸ ದಿಗಂತ ವರದಿ, ಮಂಗಳೂರು:
ಮಾನ್ಸೂನ್ ಅಬ್ಬರಕ್ಕೆ ಉಡುಪಿ ಅಕ್ಷರಶಃ ತತ್ತರಿಸಿಹೋಗಿದೆ.
ಭಾರೀ ಮಳೆಗೆ ಜನಜೀವನ ಅಸ್ತವ್ಯವಸ್ಥವಾಗಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಜನತೆಯನ್ನು ಹೈರಾಣಾಗಿಸಿದೆ.
ಉಡುಪಿ ನಗರದ ಸುತ್ತಮುತ್ತಲಿನ ಪ್ರದೇಶಗಳಾ ಮಣಿಪಾಲ, ಮಲ್ಪೆ. ಬೈಲಕೆರೆ, ಇಂದ್ರಾಣಿ, ಪಾಂಡುಬೆಟ್ಟು, ಮೂಡುಬೆಟ್ಟು, ಬನ್ನಂಜೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿ ಭಾರೀ ಸಂಕಷ್ಟ ಎದುರಾಗಿದೆ. ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಇನ್ನು ಇಂದ್ರಾಣಿಯ ಒಳರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದರೆ, ಉಡುಪಿ ಮತ್ತು ಮಲ್ಪೆಗೆ ಸಂಪರ್ಕ ಕಲ್ಪಿಸುವ ಪಂಡುಬೆಟ್ಟು ರಸ್ತೆಯಲ್ಲಿ ಗಾಳಿಯ ಹೊಡೆತಕ್ಕೆ ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಮೂಡನಿಡಂಬೂರು, ಬನ್ನಂಜೆಯ ಬಹಳಷ್ಟು ಪ್ರದೇಶಗಳು ಜಲಾವೃತವಾಗಿದ್ದು, ಇಲ್ಲಿ ದೇವಸ್ಥಾನಕ್ಕೂ ನೀರು ನುಗ್ಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.