ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್ನಲ್ಲಿ ಕರ್ನಾಟಕದ ಒಟ್ಟು 346 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಇಂದು ಸಂಜೆ ಬಿಡುಗಡೆ ಮಾಡಿದ ಈ ಮಾಹಿತಿ ಪ್ರಕಾರ, ಬೆಂಗಳೂರು ಜಿಲ್ಲೆಯವರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ.
ಬೆಂಗಳೂರು ಜಿಲ್ಲೆಯ 115, ಮೈಸೂರು 39, ವಿಜಯಪುರ 24, ಬಾಗಲಕೋಟೆ 22, ತುಮಕೂರು 16, ಹಾವೇರಿ 14, ದಾವಣಗೆರೆ 12, ಚಿಕ್ಕಮಗಳೂರು, ರಾಯಚೂರು ಮತ್ತು ಹಾಸನ ತಲಾ 10, ಚಿಕ್ಕಬಳ್ಳಾಪುರ, ದ.ಕ., ಕೊಡಗು ತಲಾ 9, ಬಳ್ಳಾರಿ, ಉಡುಪಿ, ಧಾರವಾಡ ತಲಾ 6, ಗದಗ ಮತ್ತು ಕಲಬುರ್ಗಿ ತಲಾ 5, ಚಾಮರಾಜನಗರ, ಕೋಲಾರ, ಮಂಡ್ಯ ತಲಾ 4, ಬೀದರ್, ಚಿತ್ರದುರ್ಗ, ಶಿವಮೊಗ್ಗ ತಲಾ 3, ರಾಮನಗರ ಮತ್ತು ಉ.ಕ. ತಲಾ ಇಬ್ಬರು, ಬೆಂ. ಗ್ರಾಮಾಂತರ, ವಿಜಯನಗರ ಮತ್ತು ಕೊಪ್ಪಳದ ತಲಾ ಒಬ್ಬರು ಸೇರಿ ಒಟ್ಟು 346 ಮಂದಿ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೆ.
ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಕ್ಕೆ ಕೆಎಸ್ಡಿಎಂಎ http://ukraine.karnataka.tech
ವೆಬ್ ಪೋರ್ಟಲ್ ಅನ್ನು ಅಭಿವೃದ್ಧಿ ಪಡಿಸಿದೆ. ಉಕ್ರೇನ್ನಲ್ಲಿ ಸಿಲುಕಿದ ವಿದ್ಯಾರ್ಥಿಗಳಿಗೆ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕಾಲ ಕಾಲಕ್ಕೆ ಸೂಕ್ತ ಮಾಹಿತಿಯನ್ನು ಒದಗಿಸುತ್ತಿದೆ. ಜೊತೆಗೆ ರಾಯಭಾರ ಕಚೇರಿಯು ಈ ವಿದ್ಯಾರ್ಥಿಗಳ ವಿ.ವಿ.ಗಳೊಂದಿಗೂ ಸಂಪರ್ಕದಲ್ಲಿದೆ. ಒಂದು ವೇಳೆ ಯಾರಿಗಾದರೂ ತುರ್ತು ಆವಶ್ಯಕತೆ ಇದ್ದರೆ ಕೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚನೆಯನ್ನೂ ನೀಡಲಾಗಿದೆ.