ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನೆಮ್ಮದಿ ಹಾಳಾಗುತ್ತದೆ-ಪ್ರಲ್ಹಾದ್‌ ಜೋಶಿ

ಹೊಸದಿಗಂತ ವರದಿ ಮೈಸೂರು:

ಯುವ ಸಮೂಹ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ, ಅದನ್ನು ಅನುಸರಿಸಿದರೆ ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು. ಸೋಮವಾರ ಸಚ್ಚಿದಾನಂದಸ್ವಾಮಿಯವರ 80ನೇ ಜನ್ಮದಿನೋತ್ಸವದ ಪ್ರಯುಕ್ತ ನಡೆದ ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಗೆ ಶುಭ ಕಾಮನೆ ಸಲ್ಲಿಸಿ ಮಾತನಾಡಿದ ಅವರು, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮದೇಶದಲ್ಲಿ ಇಂದಿನ ಕ್ಷೋಭೆಯ ದಿನಮಾನದಲ್ಲೂ ನಾವೆಲ್ಲ ನೆಮ್ಮದಿ,ಶಾಂತಿಯಿಂದ ಇದ್ದೇವೆ. ಇದಕ್ಕೆ ನಮ್ಮಲ್ಲಿರುವ ಧಾರ್ಮಿಕ ಸಂಸ್ಕೃತಿಯೇ ಕಾರಣ ಎಂದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯವರು ಹನುಮಾನ್ ಚಾಲೀಸ ಹಾಗೂ ದತ್ತನ ಆರಾಧನೆಯಿಂದ ಜನರಿಗೆ ಮಾನಸಿಕ ನೆಮ್ಮದಿ ಸಿಗುವಂತೆ ಮಾಡಿದ್ದಾರೆ. ಲಕ್ಷಾಂತರ ಜನರು ಶ್ರೀಗಳನ್ನು ಅನುಸರಿಸುತ್ತಿದ್ದಾರೆ. ಶ್ರೀಗಳು ಸಾವಿರಾರು ಗಿಡಮರಗಳನ್ನು ಬೆಳೆಸಿದ್ದಾರೆ. ಇದರ ಜತೆಗೆ ನೂರಾರು ಗಿಳಿಗಳನ್ನು ಸಂರಕ್ಷಿಸುತ್ತಾ ಒಂದು ರೀತಿ ಪರಿಸರ ಸಮತೋಲನ ಕಾಪಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಸಂಸದ ಪ್ರತಾಪ್ ಸಿಂಹ ಶ್ರೀಗಳಿಗೆ ಶುಭಾಶಯ ಸಲ್ಲಿಸಿ, ಕೊರೋನಾ ಸಂಕಷ್ಟದ ದಿನಗಳಲ್ಲಿ ಶ್ರೀಗಣಪತಿ ಸಚ್ಚಿದಾನಂದ ಸ್ವಾಮಿಯವರು ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಿಕೊಟ್ಟು, ನಮಗೆ ಬಹಳವಾಗಿ ನೆರವಾದರು ಎಂದು ಸ್ಮರಿಸಿದರು.
ಜೂನ್ 21 ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬರಲು ಒಪ್ಪಿಗೆ ನೀಡುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ಪ್ರಮುಖ ಕಾರಣ ಎಂದು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!