ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಒಡಿಶಾದಲ್ಲಿ ಆರೋಗ್ಯ ಸಚಿವ ನಬಾ ಕಿಶೋರ್ದಾಸ್ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ಸಮೀಪದಿಂದ ಗುಂಡು ಹಾರಿಸಿದ್ದರಿಂದ ಸಚಿವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿ ಸಚಿವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಭಾನುವಾರ, ಜಾರ್ಸುಗುಡಾದ ಬ್ರಿಜ್ರಾಜ್ ನಗರದ ಗಾಂಧಿ ಚೌಕ್ನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಚಿವರು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕಾರಿನಿಂದ ಇಳಿಯುತ್ತಿದ್ದಾಗಲೇ ಅಪರಿಚಿತ ದುಷ್ಕರ್ಮಿಗಳು ಸಮೀಪದಿಂದ ಗುಂಡು ಹಾರಿಸಿದ್ದು, ಸಚಿವರ ಎದೆಗೆ ಗುಂಡು ತಗುಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸಚಿವರ ಮೇಲೆ ಗುಂಡು ಹಾರಿಸಿದವರು ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಗುಂಡಿನ ದಾಳಿಯ ಬಗ್ಗೆ ತಿಳಿದ ನಂತರ ಹೆಚ್ಚಿನ ಸಂಖ್ಯೆಯ ಬಿಜೆಡಿ ಕಾರ್ಯಕರ್ತರು ಆಕ್ರೋಶದಿಂದ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗುಂಡಿನ ದಾಳಿ ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಮೊದಲೇ ಶೂಟಿಂಗ್ ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ಉಪಸ್ಥಿತಿಯ ನಡುವೆಯೂ ಗುಂಡಿನ ದಾಳಿ ನಡೆದಿದೆ ಭದ್ರತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಒಡಿಶಾದಲ್ಲಿ 2024ರಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.