ಹೊಸದಿಗಂತ ವರದಿ, ಮಂಡ್ಯ :
ಮುಂಡವಿಲ್ಲದ ಮಹಿಳೆಯರಿಬ್ಬರ ಶವ ಸಿಕ್ಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಗಳ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ಘೋಷಿಸಿದೆ.
ಜೂ.7ರಂದು ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಬಿ ಗ್ರಾಮದ ಕೆರಕೋಡಿ ಕಟ್ಟೆಯ ಕೆಳಗೆ ಹರಿಯುವ ನೀರಿನಲ್ಲಿ ಸುಮಾರು 30 ವರ್ಷ 32 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಹೊಟ್ಟೆಯ ಕೆಳಭಾಗದ ಶವ ದೊರೆತಿತ್ತು.
ಅದೇ ದಿನ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡರಹಳ್ಳಿ ರಸ್ತೆ ಬಳಿಯ ಸಿ.ಡಿ.ಎಸ್. ನಾಲೆಗೆ ಸಂಪರ್ಕಿಸುವ ಸಾರೋಡು ಹಳ್ಳದ ಪಕ್ಕದಲ್ಲಿರುವ ಭತ್ತದ ಗದ್ದೆಯೊಂದರಲ್ಲಿ ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಹೊಟ್ಟೆಯ ಕೆಳಭಾಗದ ಕಾಲುಗಳವರೆಗೆ ಇರುವ ಶವ ಸಿಕ್ಕಿತ್ತು. ಸುತ್ತಮುತ್ತ ಹಾಗೂ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಶವದ ರುಂಡ ಮಾತ್ರ ಸಿಕ್ಕಿರಲಿಲ್ಲ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಂಗಡಿ, ಮುಂಗಟ್ಟು, ಹೊಟೇಲ್, ಪೆಟ್ಟಿ ಅಂಗಡಿ ಸೇರಿದಂತೆ ಎಲ್ಲೆಡೆ ಜಾಲಾಡಿದ್ದರು. ಕರಪತ್ರಗಳನ್ನು ಪೊಲೀಸರು ಹಂಚಿದ್ದರು. ಆದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಎರಡೂ ಶವಗಳ ಪ್ರಕರಣವನ್ನೂ ಬೇಧಿಸಲೇಬೇಕೆಂಬ ಉದ್ದೇಶದಿಂದ ಇದೀಗ ಆರೋಪಿಗಳ ಬಗ್ಗೆ ಸುಳಿವು ನೀಡಿದಲ್ಲಿ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಘೋಷಿಸಿದ್ದಾರೆ.
ಆರೋಪಿಗಳ ಸುಳಿವು ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಂ 08232-224888, ಶ್ರೀರಂಗಪಟ್ಟಣ ಡಿವೈಎಸ್ಪಿ ಮೊ : 9480804821, ಸಿಐ ಪಾಂಡವಪುರ : 9480804858, ಸಿಪಿಐ ಕೆ.ಆರ್. ಸಾಗರ ವೃತ್ತ 9480804832 ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ.