ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳ ಗುಂಪಿನಲ್ಲಿ ಸತಿಂದರ್ ನಾಥ್ ಸನ್ಯಾಲ್ ದೊಡ್ಡ ಹೆಸರು.
1893 ರ ಏಪ್ರಿಲ್ ಮಾಸದಲ್ಲಿ ಬನಾರಸ್ ನಗರದಲ್ಲಿ ಜನಿಸಿದ ಸನ್ಯಾಲ್ ಚಿಕ್ಕ ವಯಸ್ಸಿನಲ್ಲೇ ಕ್ರಾಂತಿಕಾರಿಯಾದರು. ಸ್ವಾತಂತ್ರ್ಯ ಹೋರಾಟದಲ್ಲಿ ಗಮನಾರ್ಹ ಪಾತ್ರ ವಹಿಸಿದ ಅನುಶೀಲನ್ ಸಮಿತಿಯ ಭಾಗವಾಗಿದ್ದರು, ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸುವ ಮೂಲಕ ಬ್ರಿಟೀಷರ ವಿರುದ್ಧ ಸಂಘರ್ಷದಲ್ಲಿ ತೊಡಗಿದ್ದ ರಾಶ್ ಬಿಹಾರಿ ಬೋಸ್ ಅವರ ನಿಕಟವರ್ತಿಯಾಗಿದ್ದರು. ಚಳುವಳಿ ಕುರಿತು ಗದರ್ ಪಕ್ಷಕ್ಕೆ ಮಾರ್ಗದರ್ಶನ ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಸನ್ಯಾಲ್ ಅದಕ್ಕಾಗಿ ತಮ್ಮ ಜೀವನದಲ್ಲಿ ಬಹುದೊಡ್ಡ ತ್ಯಾಗವನ್ನೂ ಮಾಡಿದ್ದರು. ಅವರ ಕೆಚ್ಚೆದೆಯ ಹೋರಾಟಗಳಿಂದ ಕಂಗೆಟ್ಟಿದ್ದ ಬ್ರಿಟೀಷ್ ಆಡಳಿತ, ಸನ್ಯಾಲ್ ರಿಗೆ ಎರಡೆರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರಿಂದಾಗಿ ಅವರು ತಮ್ಮ ಜೀವನದ ಬಹುಭಾಗವನ್ನು ಜೈಲುಗಳಲ್ಲಿ ಕಳೆದರು. ಜೈಲಿನಲಿದ್ದುಕ್ಕೊಂಡೇ “ಬಂಡಿ ಜೀವನ್ʼ ಎಂಬ ಕೃತಿಯನ್ನು ಬರೆದರು. ಆ ಕೃತಿಯನ್ನು ಪ್ರತಿಯೊಬ್ಬ ಕ್ರಾಂತಿಕಾರಿಯೂ ಓದಿದ್ದರು. ಕ್ರಾಂತಿಕಾರಿಗಳ ಪಾಲಿಗೆ ಪರಮ ಪವಿತ್ರ ಕೃತಿಯಾಗಿತ್ತದು. ಸನ್ಯಾಲ್ 1924 ರಲ್ಲಿ ಹಿಂದೂಸ್ತಾನ್ ರೆವಲ್ಯೂಷನರಿ ಆರ್ಮಿ(HRA) ಯನ್ನು ಸ್ಥಾಪಿಸಿ ಭಾರತದಾದ್ಯಂತ ಕ್ರಾಂತಿಕಾರಿಗಳನ್ನು ಒಂದುಗೂಡಿಸಿದರು. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಘಟನೆಯೆಂದು ದಾಖಲಾಗಿದೆ. ಅವರು 1943 ರಲ್ಲಿ ಜೈಲಿನಲ್ಲಿ ನಿಧನರಾದರು. ಇನ್ನೊಂದು ವಿಚಾರವೆಂದರೆ, ಸನ್ಯಾಲ್ ರಿಗೆ ಮೂವರು ಸಹೋದರರಿದ್ದು, ಕುಟುಂಬದ ನಾಲ್ಕುಮಂದಿಯೂ ಕ್ರಾಂತಿಕಾರಿ ಚಳುವಳಿಯ ಭಾಗವಾಗಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ