ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಕ್ಬರ್ಪುರ (Akbarpur)ದ ಹೆಸರನ್ನು ಬದಲಾಯಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ಅಕ್ಬರ್ಪುರ ಹೆಸರನ್ನು ಉಚ್ಚರಿಸುವುದು ಸರಿ ಬರುವುದಿಲ್ಲ. ಹೀಗಾಗಿ ವಿಶ್ವಾಸ ಇಡಿ, ಈ ಎಲ್ಲ ವಿಚಾರಗಳು ಬದಲಾಗುತ್ತವೆ. ಈ ಹೆಸರನ್ನು ಬದಲಾಯಿಸಲಿದ್ದೇವೆ. ನಾವು ವಸಾಹತುಶಾಹಿಯ ಎಲ್ಲ ಗುರುತು, ಅವಶೇಷಗಳನ್ನು ನಮ್ಮ ರಾಷ್ಟ್ರದಿಂದ ನಿರ್ಮೂಲನೆ ಮಾಡಬೇಕು ಮತ್ತು ನಮ್ಮ ಪರಂಪರೆಯನ್ನು ಗೌರವಿಸಬೇಕು ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.
ಅಕ್ಬರ್ಪುರ ಹೊರತಾಗಿ ರಾಜ್ಯದ ಇತರ ಕೆಲವು ಜಿಲ್ಲೆಗಳ ಹೆಸರುಗಳೂ ಬದಲಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಆಲಿಗಢ, ಆಜಾಮ್ಗಢ, ಷಹಜಾನ್ಪುರ, ಗಾಜಿಯಾಬಾದ್, ಫಿರೋಜಾಬಾದ್, ಫಾರೂಕ್ಬಾದ್ ಮತ್ತು ಮೊರದಾಬಾದ್ ಹೆಸರು ಕೂಡ ಬದಲಾಗಲಿದೆ ಎಂದು ಮೂಲಗಳು ಸೂಚನೆ ನೀಡಿವೆ.
ಯೋಗಿ ಆದಿತ್ಯನಾಥ್ ಅವರು 2017ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಗುಲಾಮಗಿರಿಯ ಚಿಹ್ನೆಗಳನ್ನು ನಿರ್ಮೂಲನೆ ಮಾಡುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಪ್ರಯತ್ನದ ಭಾಗವಾಗಿ ರಾಜ್ಯದ ಹಲವು ರಸ್ತೆಗಳು, ಉದ್ಯಾನವನಗಳು, ಜಂಕ್ಷನ್ಗಳು ಮತ್ತು ಕಟ್ಟಡಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲಾಗಿದೆ.
2019ರ ಕುಂಭಮೇಳಕ್ಕೆ ಸ್ವಲ್ಪ ಮೊದಲು ರಾಜ್ಯ ಸರ್ಕಾರವು ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿತ್ತು. ಈ ಐತಿಹಾಸಿಕ ಸ್ಥಳದ ಮೂಲ ಹೆಸರು ಪ್ರಯಾಗ್ರಾಜ್. ಇದನ್ನು ಮೊಘಲರು ‘ಅಲಹಾಬಾದ್’ ಎಂದು ಬದಲಾಯಿಸಿದರು ಎನ್ನುವ ವಾದವಿದೆ.