ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುವವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ಇನ್ಮುಂದೆ ಬಸ್ನಲ್ಲಿ ಕಂಡಕ್ಟರ್ ಜೊತೆ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ. ಬದಲಿಗೆ ಯುಪಿಐ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಒದಗಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ನಿತ್ಯ ಬಸ್ಗಳಲ್ಲಿ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ‘ಚಿಲ್ಲರೆ’ ವಿಷಯಕ್ಕಾಗಿ ಜಗಳ ನಡೆಯುತ್ತಿರುತ್ತದೆ. ಆದರೆ ಅದನ್ನು ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮಾಸ್ಟರ್ ಪ್ಲಾನ್ ಮಾಡಿದ್ದು, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಯುಪಿಐ ಪೇಮೆಂಟ್ (UPI Payment) ವ್ಯವಸ್ಥೆ ಜಾರಿಗೆ ತರಲು ನಿಗಮ ನಿರ್ಧರಿಸಿದೆ.
ಇದರಿಂದಾಗಿ ಪ್ರಯಾಣಿಕರು ಇನ್ನು ಮುಂದೆ ಪೇಟಿಎಂ, ಫೋನ್ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ, ಟಿಕೆಟ್ ಖರೀದಿಸಬಹುದು. ನಗದು ರಹಿತ ಪಾವತಿ ಮೂಲಕ ಗ್ರಾಹಕರು ಹಾಗೂ ಸಾರಿಗೆ ಸಿಬ್ಬಂದಿಗೆ ಅನುಕೂಲ ಕಲ್ಪಿಸುವುದು ಕೆಎಸ್ಆರ್ಟಿಸಿ ಉದ್ದೇಶವಾಗಿದೆ.
ನಿನ್ನೆಯಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿಯ ಗ್ರಾಮಾಂತರ ಡಿಪೋ-3ರಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆಎಸ್ಆರ್ಟಿಸಿಯ ಎಲ್ಲ ಬಸ್ಗಳಲ್ಲಿ ಯುಪಿಐ ಮೂಲಕ ಪಾವತಿಸಿ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ.
ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕ್ಯೂಆರ್ ಕೋಡ್ಗಳನ್ನು ಅಳವಡಿಸಲಾಗುತ್ತದೆ. ಆಗ ಗ್ರಾಹಕರು ಫೋನ್ಪೇ, ಗೂಗಲ್ ಪೇ, ಪೇಟಿಎಂ ಸೇರಿ ಯಾವುದೇ ಆನ್ಲೈನ್ ಅಪ್ಲಿಕೇಶನ್ಗಳ ಮೂಲಕ ಹಣವನ್ನು ಪಾವತಿಸಿ, ಟಿಕೆಟ್ ಖರೀದಿಸಬಹುದಾಗಿದೆ. ಕೆಎಸ್ಆರ್ಟಿಸಿ ಯ ಈ ನಿರ್ಧಾರಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೆ, ಎಲ್ಲಾ ಬಸ್ ಗಳಲ್ಲೂ ಈ ಯೋಜನೆ ಜಾರಿಗೆ ಬರಲಿದೆ.