ಯುಪಿಎಸ್‌ಸಿ ಪರೀಕ್ಷೆ: 890 ರ‍್ಯಾಂಕ್ ಪಡೆದ ವಿಜಯಪುರ ಜಿಲ್ಲೆಯ ಯಲಗೂರೇಶ ನಾಯಕ್

ಹೊಸದಿಗಂತ ವರದಿ, ವಿಜಯಪುರ:

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದ ಯಲಗೂರೇಶ ಅರ್ಜುನ ನಾಯಕ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 890 ನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಮೂಲತಃ ಬಡ ಕುಟುಂಬದ ಯಲಗೂರೇಶ ನಾಯಕ್ ಐಎಎಸ್ ಅಧಿಕಾರಿಯಾಗುವ ಗುರಿಯನ್ನು ಹೊಂದಿದ್ದು, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಯುಪಿಎಸ್‌ಸಿ ಉಚಿತ ಕೋರ್ಸ್ ಪಡೆದುಕೊಂಡಿದ್ದಾರೆ.

ಇಲ್ಲಿನ ಅರ್ಜುನ ನಾಯಕ್ ಹಾಗೂ ಉಮಾಬಾಯಿ ನಾಯಕ್ ದಂಪತಿಗೆ ಯಲಗೂರೇಶ ಸೇರಿದಂತೆ 6 ಜನ ಮಕ್ಕಳಿದ್ದಾರೆ. ಯಲಗೂರೇಶನ ಅಣ್ಣ ಸಚಿನ್ ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ತಮ್ಮ ರಾಹುಲ್ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಅಲ್ಲದೆ ರೇಖಾ, ಶಿಲ್ಪಾ ಹಾಗೂ ಅಶ್ವಿನಿ ಮೂವರು ಅಕ್ಕಂದಿರು ಇದ್ದಾರೆ. ಈ ಪೈಕಿ ಇಬ್ಬರು ಅಕ್ಕಂದಿರರಿಗೆ ಮದುವೆಯಾಗಿದೆ.

ಬಡ ಕುಟುಂಬದ ಯಲಗೂರೇಶ ಈತನು ಪ್ರೌಢಶಾಲೆಯಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಸ್ಸೆಸ್ಸೆಲ್ಸಿಯಲ್ಲಿ 90.88 ಹಾಗೂ ಪಿಯುನಲ್ಲಿ 92.5 ಅಂಕ ಪಡೆದುಕೊಂಡಿದ್ದಾರೆ.

ಐಎಎಸ್ ಅಧಿಕಾರಿಯಾಗುವ ಗುರಿಯನ್ನು ಹೊಂದಿರುವ ನನಗೆ ಯುಪಿಎಸ್‌ಯಲ್ಲಿ 890 ನೇ ರ‍್ಯಾಂಕ್ ಬಂದಿರುವುದು ಪೂರ್ಣ ತೃಪ್ತಿತಂದಿಲ್ಲ. 600 ರ‍್ಯಾಂಕ್ ಒಳಗಡೆ ಪಡೆದರೆ ಐಎಎಸ್ ಅಧಿಕಾರಿಯಾಗಬಹುದು, ಈ ನಿಟ್ಟಿನಲ್ಲಿ ಮತ್ತೊಮ್ಮೆ ಮರಳಿ ಯತ್ನವ ಮಾಡುವೆ. ಅಣ್ಣನ ಪ್ರೋತ್ಸಾಹದಿಂದ ನಾನು ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿರುವೆ ಎಂದು ‘ಹೊಸ ದಿಂಗತ’ಕ್ಕೆ ಯಲಗೂರೇಶ ನಾಯಕ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!