ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಒಂಬತ್ತನೇ ದಿನವೂ ಮುಂದುವರಿದಿದೆ.ರಂಧ್ರ ಕೊರೆದು ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಚಿಂತನೆ ನಡೆದಿರುವ ನಡುವೆ, ರೋಬೋಟಿಕ್ ತಂತ್ರಜ್ಞಾನದ ಮೊರೆ ಹೋಗಲಾಗಿದೆ.
2 ರೋಬೋಗಳನ್ನು ಸುರಂಗದೊಳಗೆ ಕಳುಹಿಸಲಾಗಿದೆ. ಅವುಗಳ ನೆರವಿನಿಂದ ಸಿಲುಕಿದವರನ್ನು ಹೊರತರುವ ಪ್ರಯತ್ನ ಮಾಡಲಾಗುವುದು ಎಂದು ರೊಬೊಟಿಕ್ಸ್ ತಂಡ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎನ್ಎಚ್ಐಡಿಸಿಎಲ್ ನಿರ್ದೇಶಕ ಅಂಶು ಮನೀಶ್ ಅವರು, ಡಿಆರ್ಡಿಒದ ರೊಬೊಟಿಕ್ಸ್ ತಂಡವು ಕೆಲಸ ಮಾಡಲು ಪ್ರಾರಂಭಿಸಿದೆ. ತಂಡವು 20 ಮತ್ತು 50 ಕೆಜಿ ತೂಕದ ಎರಡು ರೋಬೋಟ್ಗಳನ್ನು ಸುರಂಗದೊಳಗೆ ಕಳುಹಿಸಿದೆ. ರೋಬೋಟ್ಗಳು ನೆಲ ಮತ್ತು ಮರಳಿನಲ್ಲಿ ನಡೆಯುತ್ತವೆ. ಇವುಗಳು ಕುಸಿದ ಮಣ್ಣಿನಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಸುರಂಗದೊಳಗೆ ಭೂಕುಸಿತ ಉಂಟಾಗಿರುವ ಜಾಗಕ್ಕೆ ರೋಬೋಟ್ಗಳನ್ನು ಕಳುಹಿಸಲಾಗುತ್ತದೆ. . ಅಲ್ಲಿರುವ ಮಣ್ಣನ್ನು ರೋಬೋಟ್ ಮೂಲಕ ತೆಗೆದು ಹಾಕುವ ಕೆಲಸ ಮಾಡಲಾಗುತ್ತದೆ. ಇದರ ಜೊತೆಗೆ ದೊಡ್ಡ ಪೈಪ್ ಅನ್ನು ಸುರಂಗದೊಳಗೆ ಅಳವಡಿಸಲಾಗಿದೆ. ಇದರಿಂದ ಆಹಾರ, ನೀರು, ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಎಲ್ಲರನ್ನೂ ಅಲ್ಲಿಂದ ಹೊರತರುವ ಪ್ರಯತ್ನಗಳು ಸಾಗಿವೆ. ಸ್ಥಳದಲ್ಲಿ ಎರಡು ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಕಾರ್ಯಾಚರಣೆಯ ನಡುವೆ ಮತ್ತಷ್ಟು ಮಣ್ಣು ಕುಸಿತ ಉಂಟಾಗುತ್ತಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಎನ್ಡಿಆರ್ಎಫ್ ಐಜಿ ಬುಂದೇಲಾ ಅವರು ಹೇಳಿದ್ದಾರೆ.