ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಕಾರ್ಯತಂತ್ರ ಕುರಿತು ಬಿಜೆಪಿ ಮಂಗಳವಾರ ದೆಹಲಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿದೆ. ನಿನ್ನೆ 10 ಗಂಟೆಗಳ ಸುದೀರ್ಘ ಸಭೆ ನಡೆದಿದ್ದು, ಇಂದು ಮತ್ತೆ ಎರಡನೇ ಸುತ್ತು ಸಭೆ ನಡೆಯಲಿದೆ.
ಯುಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಇತರ ಮೂವರು ರಾಜ್ಯ ಶಾಸಕರು ಬಿಜೆಪಿ ತೊರೆದ ದಿನದಂದೇ ಸಭೆ ನಡೆಸಲಾಗಿದೆ. ಪಕ್ಷ ತೊರೆದ ಶಾಸಕರು ಸಮಾಜವಾದಿ ಪಕ್ಷ ಸೇರುವ ನಿರೀಕ್ಷೆ ಇದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಯ ಅಧ್ಯಕ್ಷತೆ ವಹಿಸಿದ್ದು, ಸಭೆಯಲ್ಲಿ ಬಿಜೆಪಿಯ ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಪಕ್ಷದ ಯುಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಿಎಂ ಯೋಗಿ ಆದಿತ್ಯನಾಥ್, ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಉಪಸ್ಥಿತರಿದ್ದರು.
ಕೋವಿಡ್ ಪಾಸಿಟಿವ್ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಸಾದ್ ನಡ್ಡ ಅವರು ಸಹ ವಿಡಿಯೊ ಮುಖೇನ ಪಾಲ್ಗೊಂಡಿದ್ದರು ಎಂದು ಎ ಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಮಿತ್ ಶಾ ಅವರು ಪ್ರಮುಖ ಕ್ಷೇತ್ರಗಳ ವಲಯವಾರು ಪರಿಶೀಲನೆ ನಡೆಸಿದ್ದು, ರಾಜ್ಯದ ವಾಸ್ತವ ಪರಿಸ್ಥಿತಿ ಬಗ್ಗೆ ಉಸ್ತುವಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಚುನಾವಣಾ ಆಯೋಗ ರ್ಯಾಲಿಗಳನ್ನು ನಿಲ್ಲಿಸುವ ಆದೇಶದ ಹಿನ್ನೆಲೆಯಲ್ಲಿ ಪ್ರಚಾರದ ಭವಿಷ್ಯದ ಕಾರ್ಯಕ್ರಮಗಳ ರೂಪುರೇಷೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ.