ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಕರ್ನಾಟಕದ ಜಲಪಾತ್ರೆ ಖ್ಯಾತಿಯ ಚಿತ್ರದುರ್ಗ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಕೋಡಿ ಬೀಳುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ವಿಶ್ವೇಶ್ವರಯ್ಯ ಜಲ ನಿಗಮ, ತಾಲೂಕು ಆಡಳಿತ ಜೊತೆಗ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತುರ್ತು ಸಭೆ ನಡೆಸಿದ್ದು, ಅಗತ್ಯ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.
ಪ್ರವಾಹದ ಸಾಧ್ಯತೆಗಳ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದ್ದು, ಸಂಭಾವ್ಯ ಪರಿಸ್ಥಿತಿ ಎದುರಿಸಲು ಐದು ಹಾಸ್ಟೆಲ್ಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇನ್ನು ತುರ್ತು ಪರಿಸ್ಥಿತಿಯಲ್ಲಿ ನೆರವಿಗಾಗಿ 24×7 ಸಹಾಯವಾಣಿ ತೆರೆಯಲಾಗಿದೆ. ವಿದ್ಯುತ್ ಅಭಾವ ಆಗದಂತೆ ಬೆಸ್ಕಾಂಗೆ ಸೂಚಿಸಲಾಗಿದೆ.
ತುರ್ತು ಪರಿಸ್ಥಿತಿ ನಿರ್ವಹಿಸಲು ಏಳು ಆಂಬುಲೆನ್ಸ್ ಗಳನ್ನು ಸಜ್ಜಾಗಿಡಲಾಗಿದೆ. 24×7 ವೈದ್ಯರ ಲಭ್ಯತೆ, ಔಷಧಿಗಳನ್ನು ಸಂಗ್ರಹಿಸಲಾಗಿದ್ದು, ಪಿಡಬ್ಲ್ಯೂಡಿ ಇಲಾಖೆಗೆ ಸುರಕ್ಷತೆಯನ್ನು ಕಾಪಾಡಲು ಸೂಚಿಸಿಲಾಗಿದೆ. ಎನ್ಡಿಆರ್ಎಫ್ ತಂಡಕ್ಕೆ ಕೂಡಾ ತುರ್ತು ಪರಿಸ್ಥಿತಿ ನಿರ್ವಹಿಸಲು ಮನವಿ ಮಾಡಲಾಗಿದೆ.