ಹೊಸದಿಗಂತ ವರದಿ, ಚಿಕ್ಕೋಡಿ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತವೆ. ರೈತರ ಬೆಳೆ ಪ್ರಮಾಣವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ರೈತ ಉತ್ಪಾದನಾ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲಾವಾರು ಸೂಕ್ತ ಬೆಳೆಯನ್ನು ಗುರುತಿಸಿ ಆ ಬೆಳೆಯ ಉತ್ಪಾದನೆ ಹೆಚ್ಚಿಸಿ ರೈತರ ಆದಾಯ ದ್ವಿಗುಣಗೊಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಧಾರ್ಮಿಕ ದತ್ತಿ ಹಾಗೂ ಹಜ್ ಮತ್ತ ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಸ್ಥಳಿಯ ರೈತರ ಆರ್ಥಿಕ ಸಬಲಿಕರಣ ಹಿತ ದೃಷ್ಟಿಯಿಂದ ಪ್ರಾರಂಭಿಸಲಾಗುತ್ತಿರುವ ʼಬಸವಣ್ಣ ರೈತ ಉತ್ಪದಕರ ಕಂಪನಿ ಲಿʼ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶ ಕೃಷಿ ಪ್ರಧಾನ ದೇಶ ಎನ್ನುತ್ತೇವೆ, ಆದರೆ ರೈತನ ಕಷ್ಟ ನೋಡಿದರೆ ದುಃಖ ಎನಿಸುತ್ತದೆ. ಸೈನಿಕ ಹಾಗೂ ರೈತ ದೇಶದ ಎರಡು ಕಣ್ಣು. ಮಾಜಿ ಪ್ರಧಾನಿ ದಿ.ವಾಜಿಪೇಯಿ ಹಾಗೂ ಪ್ರಧಾನಿ ಮೋದಿ ಅವರು ರೈತರ ಶ್ರೇಯೋಭ್ಯುದಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ರೈತರನ್ನು ಸ್ವಾವಲಂಬಿಯಾಗಿಸುವ ದೃಷ್ಟಿಯಿಂದ ಕೇಂದ್ರ ಸರಕಾರದ ಸಹಕಾರದಲ್ಲಿ ಹಲವು ಇಲಾಖೆಯ ಸಹಯೋಗದಲ್ಲಿ ಉತ್ಪಾದಕ ಕಂಪನಿ ಆರಂಭಿಸಲಾಗುತ್ತಿದ್ದು, ರೈತರು ಮದ್ಯವರ್ತಿಗಳ ಮೋಸಕ್ಕೊಳಗಾದಂತೆ ತಡೆಯಲು ರೈತರಿಂದ ನೇರ ಖರೀದಿ ಹಾಗೂ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಆದಿಜಾಂಬವ ನಿಗಮಮಂಡಳಿ ಅದ್ಯಕ್ಷ ಹಾಗೂ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ರೈತರು ತಮ್ಮದೆ ಸಂಸ್ಥೆಯೆಂದು ಭಾವಿಸಿ ಸಕ್ರೀಯವಾಗಿ ತೊಡಗಿ. ಮೋದಿಯವರ ಕನಸಿನಂತೆ ರೈತರು ತಮ್ಮ ಜೀವನ ಬಲವರ್ಧನೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ ಎಂದರು.
ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿದ್ಯ ನಿಡಸೊಶಿ ಮಠದ ಪಂಚಮಶಿವಲಿಂಗೇಶ್ವರ ಸ್ವಾಮಿಗಳು ಹಾಗೂ ಸಾನಿಧ್ಯ ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀಗಳು ವಹಿಸಿ ಆಶಿರ್ವಚನ ನುಡಿದರು.
ಸಚಿವ ಉಮೇಶ ಕತ್ತಿ, ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ