ಹೊಸ ದಿಗಂತ ವರದಿ, ಕಲಬುರಗಿ:
ಜಿಲ್ಲೆಯಾದ್ಯಂತ ವರುಣನ ಆಭ೯ಟದ ರುದ್ರನತ೯ನ ವಿಪರಿತವಾಗಿದ್ದು,ಬಹುತೇಕ ತಾಲೂಕಿನ ಸೇತುವೆಗಳ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಮಾಪ೯ಟ್ಟಿದೆ.ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲೆಯ ಯಡ್ರಾಮಿ ತಾಲೂಕಿನ ತೆಗಲಬಾಳ ಗ್ರಾಮದಲ್ಲಿ ಮಹಾಂತೇಶ ಸಜ್ಜನ ಅವರ ಮೇಲ್ಫಾವಣಿ ಹಾಗೂ ಗೊಡೆಯೂ ಧರೆಗೆ ಉರುಳಿ ಹೋಗಿದೆ.ಇದರಿಂದ ಮನೆಯ ಸದಸ್ಯೆ ಶಿಲ್ಫಾ ಸಜ್ಜನ ಎಂಬುವವರಿಗೆ ಗಾಯವಾಗಿದ್ದು,ಇನ್ನೂಳಿದ ಸದಸ್ಯರು ಜೀವ ರಕ್ಷಿಸಿಕೊಂಡು ಹೊರ ಬಂದಿದ್ದಾರೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿದು, ನೀರಿನ ಪ್ರಮಾಣ ಹೆಚ್ಚಳವಾಗಿ ತಾಲ್ಲೂಕಿನ ಘತ್ತರಗಿ, ದೇವಲ ಗಾಣಗಾಪುರ ಸೇತುವೆಗಳು ಜಲಾವೃತಗೊಂಡಿವೆ.
ಘತ್ತರಗಿ ಸೇತುವೆ ಮೇಲೆ ಎರಡು ಅಡಿ ನೀರು ಹರಿಯುತ್ತಿದು, ಅಫಜಲಪುರ- ಘತ್ತರಗಾ ಮಾರ್ಗವಾಗಿ, ಸಿಂದಗಿ, ವಿಜಯಪುರಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ದೇವಲ್ ಗಾಣಗಪೂರದ ಸೇತುವೆ ಮೇಲಿಂದಲೂ ನೀರು ಹರಿದಿದೆ. ಸೇತುವೆ ಸಂಪೂರ್ಣ ಜಲವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ. ದೇವಲ ಗಾಣಗಾಪುರ – ಜೇವರ್ಗಿ ಸಂಪರ್ಕ ಕಡಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಗ್ರಾಮಗಳ ಮೇಲೆ ಪ್ರವಾಹದ ಭೀತಿ
ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದ ಹಿನ್ನಲೆಯಲ್ಲಿ ಅಫಜಲಪುರ ಹಾಗೂ ಜೇವರ್ಗಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಭೀಮಾ ನದಿ ದಡದಲ್ಲಿರುವ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ಕಬ್ಬು, ತೊಗರಿ, ಹತ್ತಿ, ಹೆಸರು, ಉದ್ದು ಸೇರಿದಂತೆ ಹಲವಾರು ಬೆಳೆಗಳು ಜಲಾವೃತವಾಗಿವೆ. ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುವ ಪರಸ್ಥಿತಿ ಎದುರಾಗಿದೆ.
ಸೇತುವೆ ಮೇಲೆ ಲಾರಿ ಓಡಿಸಿದ ಭೂಪ
ದೇವಲ್ ಗಾಣಗಪೂರದ ಸೇತುವೆ ಮೇಲಿಂದ ನೀರು ಹರಿದಿದರಿಂದ ಸೇತುವೆ ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಳಿಸಲಾಗಿತು. ಈ ಮಧ್ಯೆ ಲಾರಿ ಚಾಲಕನೋರ್ವನ ದುಸ್ಸಾಹಸ ಮಾಡಿ ಪೊಲೀಸ್ ರ ಭದ್ರತೆ ನಡುವೆ ಸೇತುವೆ ಮೇಲಿಂದ ಲಾರಿ ಓಡಿಸಿದ್ದಾನೆ.