ಹೊಸದಿಗಂತ ವರದಿ ಹುಬ್ಬಳ್ಳಿ:
ನಟ ಶಿವರಾಜಕುಮಾರ್ ಅವರ 125 ನೇ ಸಿನಿಮಾ ವೇದ ಯಶಸ್ವಿಯಾದ ಹಿನ್ನೆಲೆ ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ ಅಭಿಮಾನಿಗಳ ಸಂಘ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘ ವತಿಯಿಂದ ಜ.6 ರಂದು ಮಧ್ಯಾಹ್ನ 2 ಗಂಟೆಗೆ ನಗರದ ದುರ್ಗದಬೈಲ್ ನಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ ಅಭಿಮಾನಿಗಳ ಸಂಘ ರಾಜ್ಯ ಉಪಾಧ್ಯಕ್ಷ ಶಿವಾನಂದ ಮುತ್ತಣ್ಣವರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ತೆರಕಂಡ ವೇದ ಸಿನಿಮಾ ಬಹಳ ಯಶಸ್ವಿಯಾಗಿ ಸಾಗುತ್ತಿದ್ದು, ಸಾವಿರಾರೂ ಅಭಿಮಾನಿಗ ಮನ ಗೆದ್ದಿದೆ. ಈ ಹಿನ್ನೆಲೆ ಮೈಸೂರು, ಮಂಡ್ಯ, ಹಾಸನ ಸೇರಿದಂತೆ ಹಲವಾರು ಜಿಲ್ಲೆಯಲ್ಲಿ ಶಿವ ಸಂಭ್ರಮ ವಿಜಯೋತ್ಸವ ಆಚರಿಸಲಾಗುತ್ತಿದ್ದು, ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಮಾಡಲಾಗುತ್ತಿದೆ ಎಂದರು.
ಅಂದು ಇಲ್ಲಿಯ ದುರ್ಗದಬೈಲ್ ನಿಂದ ಆರಂಭವಾಗುವ ಬೃಹತ್ ಮೆರವಣಿಗೆ ಸ್ವತಃ ನಟ ಶಿವರಾಜಕುಮಾರ ಅವರು ಭಾಗವಹಿಸಲಿದ್ದಾರೆ. ಮೆರವಣಿಗೆ ದುರ್ಗದ ಬೈಲ್ ನಿಂದ ಹೊರಟು ಬ್ರಾಡವೇ, ಮರಾಠಗಲ್ಲಿ ವೃತ್ತ, ಕೊಪ್ಪಿಕರ್ ರಸ್ತೆ ಮೂಲಕ ಅಪ್ಸರ್ ಚಿತ್ರಮಂದಿರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಾಂಜ್, ಕರಡಿ ಕುಣಿತ, ಜಗ್ಗಲಗಿ, ಕೋಲಾಟ ಸೇರಿದಂತೆ ಜನಪದ ಕಲಾ ತಂಡಗಳು ಹಾಗೂ ಸಾವಿರಾರೂ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಶಿವರಾಜಕುಮಾರ ಅವರಿಗೆ ಬೃಹತ್ ಸೇಬು ಹಣ್ಣಿನ ಹಾರ ಹಾಕಲಾಗುವುದು. ದೇಶಿ ಕ್ರೀಡೆ ಮಲ್ಲಕಂಬ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.