ಹೊಸದಿಗಂತ ವರದಿ,ಧಾರವಾಡ:
ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು, ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಾ.ನ.ವಜ್ರಕುಮಾರ್ ಶುಕ್ರವಾರ ಮುಂಜಾನೆ ನಿಧನರಾದರು.
ಕೊಕ್ಕರ್ಣೆ ಅರಮನೆಯ ಭೋಜರಾಜಯ್ಯ ಹಾಗೂ ಕುತ್ಯಾರು ಅರಮನೆಗೆ ಸೇರಿದ ಚಂದ್ರಮತಿ ಅಮ್ಮನವರ ದ್ವಿತೀಯ ಪುತ್ರರಾಗಿ ಮೇ 29,1939ರಂದು ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ಅವರು ಜನಿಸಿದರು.
ಉನ್ನತ ಶಿಕ್ಷಣ ಅರ್ಥಶಾಸ್ತ್ರದಲ್ಲಿ ಎಂ.ಎ ಮುಗಿಸಿ, ಎಂಜಿಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನಆರಂಭಿಸಿದರು.1974 ರಲ್ಲಿ ಮೂಡಬಿದ್ರಿಯ ಸುಮನರೊಂದಿಗೆ ವಿವಾಹವಾದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಡಾ. ವೀರೇಂದ್ರ ಹೆಗ್ಗಡೆಯವರು 1973ರಲ್ಲಿ ಧಾರವಾಡದ ಜನತಾ ಶಿಕ್ಷಣ ಸಮಿತಿ ಸಂಸ್ಥೆಯನ್ನು ವಹಿಸಿಕೊಂಡ ಬಳಿಕ ಡಾ.ನ.ವಜ್ರಕುಮಾರ್ ಅವರು ತಮ್ಮ ಕ್ರಿಯಾಶೀಲತೆ ಹಾಗೂ ಕಾರ್ಯದಕ್ಷತೆಗಳಿಂದ ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿಗಳಾಗಿ ಎಂಜಿನಿಯರಿಂಗ್,ದಂತ ಮಹಾವಿದ್ಯಾಲಯ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದಾರೆ.
ಅವಿರತ ಶ್ರಮದಿಂದ ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿ ಧಾರವಾಡದಲ್ಲಿ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿದ ಕೀರ್ತಿಯ ಜೊತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದಾತರಾಗಿ ಅಜಾತಶತ್ರು ಗಳೆನಿಸಿಕೊಂಡಿದ್ದರು.
ಅವರು ಜೈನ ಸಮಾಜದ ಹಿರಿಯರು ಮಾರ್ಗದರ್ಶಕರೂ ಆಗಿ ಧಾರವಾಡ ಜೈನ್ ಮಿಲನ್, ಧಾರವಾಡ ಇದರ ಮಹಾಪೋಷಕರು, ಸ್ಥಾಪಕರೂ ಆಗಿ ಹಲವಾರು ಧಾರ್ಮಿಕ ಕಾರ್ಯಗಳನ್ನು ಕೈಗೊಂಡು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ.