ಹೊಸದಿಗಂತ ವರದಿ,ಚಿತ್ರದುರ್ಗ:
ಇಲ್ಲಿನ ವಿದ್ಯಾಸಂಸ್ಥೆಯ ಎಸ್.ಆರ್.ಎಸ್. ಹೆರಿಟೇಜ್ ಶಾಲೆಯ ೧ನೇ ತರಗತಿ ವಿದ್ಯಾರ್ಥಿ ಎ.ಆರ್. ವಿದ್ವತ್ ಆರಾದ್ಯ ಐ.ಸಿ.ಎಸ್.ಇ. ವಿಭಾಗ ಅತೀಚಿಕ್ಕ ವಯಸ್ಸಿನಲ್ಲಿಯೇ ತನ್ನ ಜ್ಞಾಪಕ ಶಕ್ತಿಯ ಜಾಣ್ಮೆಯಿಂದ ’ಇಂಡಿಯಾ ಬುಕ್ ಆಪ್ ರೆಕಾರ್ಡ್’ನಲ್ಲಿ ಗುರುತಿಸಿಕೊಂಡಿದ್ದಾರೆ. ಇದು ಜಿಲ್ಲೆ ಮತ್ತು ಶಾಲೆಗೆ ಹೆಮ್ಮಯ ವಿಷಯವಾಗಿದೆ.
ಕೇವಲ ಆರೂವರೆ ವರ್ಷ ವಯಸ್ಸಿನ ಈತ ತನ್ನೊಳಗಿರುವ ಪ್ರತಿಭೆಯನ್ನು ಈ ಮೂಲಕ ಜಗತ್ತಿಗೆ ಸಾರಿದ್ದಾನೆ. ೧೨೦೦ ಕ್ಕೂ ಹೆಚ್ಚು ಸಾಮಾನ್ಯಜ್ಞಾನ ಪ್ರಶ್ನೆಗಳಿಗೆ ಉತ್ತರಗಳು, ೧೯೫ ದೇಶಗಳ ಹೆಸರುಗಳು, ಭಾರತದ ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಹೆಸರನ್ನು ಹೇಳುತ್ತಾರೆ. ಅಲ್ಲದೇ ೧೦ ರಿಂದ ೩೦ ಮಗ್ಗಿಗಳನ್ನು, ೨೦ ಸಂಸ್ಕೃತ ಶ್ಲೋಕಗಳು, ೫೦ ಗಾದೆಗಳು, ೬೦ ಹಿಂದೂ ಸಂವತ್ಸರಗಳನ್ನು ೧೯೫ ಮಹಾಭಾರತ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಭಾರತದ ನದಿಗಳು ಹಾಗೂ ೫೦ ಪದಬಂಧಗಳನ್ನು ತನ್ನ ಜ್ಞಾನ ಚಾತುರ್ಯತೆಯಿಂದ ಪ್ರಸ್ತುತ ಪಡಿಸಿದ್ದಾನೆ.
ಬಿ.ಎಂ.ರಾಘವೇಂದ್ರ ಮತ್ತು ಎನ್.ಅಂಬಿಕಾ ದಂಪತಿಯ ಪುತ್ರ ಎ.ಆರ್.ವಿದ್ವತ್ಆರಾದ್ಯ. ಈತನ ಅಮೋಘ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷ ಅಮೋಘ್ಬಿ.ಎಲ್., ಆಡಳಿತಾಧಿಕಾರಿ ಡಾ|| ಟಿ.ಎಸ್.ರವಿ, ಶಾಲೆಯ ಪ್ರಾಂಶುಪಾಲ ಪ್ರಭಾಕರ್ಎಂ.ಎಸ್. ಹಾಗೂ ಶಾಲೆಯ ಬೋಧಕ, ಬೋದಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
ವಿದ್ಯಾರ್ಥಿಯು ಮುಂದಿನ ಹಂತವಾದ ’ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲಿ ೫೦೦೦ ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ತಯಾರಿ ನಡೆಸುತ್ತಿದ್ದು, ಸಂಸ್ಥೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗೆ ಶುಭ ಕೋರಿದೆ.