ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಚಿತ್ರರಂಗದಲ್ಲಿ ಸ್ಟಾರ್ ವಾರ್ ಸಾಮಾನ್ಯ ವಿಷಯ. ಅದ್ರಲ್ಲೂ ತಮಿಳು ಚಿತ್ರರಂಗದ ಎರಡು ದೊಡ್ಡ ಸ್ಟಾರ್ಗಳಾದ ವಿಜಯ್ ಮತ್ತು ಅಜಿತ್ ಕುಮಾರ್ ಅಭಿಮಾನಿಗಳ ನಡುವಿನ ಪೈಪೋಟಿ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ.
ಈ ನಡುವೆ ಇವರಿಬ್ಬರು ಪೈಪೋಟಿ ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಎಲ್ಲೆಡೆ ಹರಿದಾಡುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಸ್ವತಃ ಅಜಿತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಒಂದೇ ವೇದಿಕೆಯಲ್ಲಿ ಸ್ಟಾರ್ ನಟರು
ಇಂಗ್ಲೆಂಡ್ನ ಸಿಲ್ವರ್ಸ್ಟೋನ್ನಲ್ಲಿ ನಡೆಯಲಿರುವ ಲೆ ಮಾನ್ಸ್ ರೇಸ್ಗೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಹಸಿರು ಧ್ವಜ ಹಾರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ರೇಸ್ನಲ್ಲಿ ಅಜಿತ್ ಕುಮಾರ್ ತಮ್ಮ ತಂಡದ ಪರವಾಗಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಹಲವು ವರ್ಷಗಳ ಬಳಿಕ ಇಬ್ಬರು ಸ್ಟಾರ್ಗಳು ಒಂದೇ ಕ್ರೀಡಾ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:
34 ವರ್ಷಗಳಿಂದ ನಾವಿಬ್ಬರು ಸಹೋದ್ಯೋಗಿಗಳು
ಈ ಕುರಿತು ಮಾತನಾಡಿರೋ ಅಜಿತ್, ವಿಜಯ್ ಅವರನ್ನು ಆತ್ಮೀಯವಾಗಿ ಸ್ಮರಿಸಿದ್ದಾರೆ. ತಮ್ಮ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಸಿಲ್ವರ್ಸ್ಟೋನ್ಗೆ ಆಗಮಿಸಿ ರೇಸ್ ವೀಕ್ಷಿಸುತ್ತಿರುವುದಕ್ಕೆ ಧನ್ಯವಾದ ಹೇಳಿದ ಅವರು, ಕಳೆದ 34 ವರ್ಷಗಳಿಂದ ವಿಜಯ್ ತಮ್ಮ ಸಹೋದ್ಯೋಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ವಿಜಯ್ ಇದೀಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವುದು ತಮಗೆ ಸಂತಸ ತಂದಿದೆ ಎಂದೂ ಅಜಿತ್ ತಿಳಿಸಿದ್ದಾರೆ.
ಲೆ ಮಾನ್ಸ್ ಸರಣಿಯಂತಹ ಅಂತಾರಾಷ್ಟ್ರೀಯ ರೇಸ್ಗಳನ್ನು ಭಾರತ, ಅದರಲ್ಲೂ ಚೆನ್ನೈನಲ್ಲಿ ಆಯೋಜಿಸಲು ಅಗತ್ಯವಿರುವ ಮೂಲಸೌಕರ್ಯ ಮತ್ತು ವ್ಯವಸ್ಥೆಗಳನ್ನು ಪರಿಶೀಲಿಸಲು ವಿಜಯ್ ಆಗಮಿಸಿರುವುದು ಸಂತಸದ ವಿಚಾರ ಎಂದಿದ್ದಾರೆ.



