ಹೊಸದಿಗಂತ ಡಿಜಿಟಲ್ ಡೆಸ್ಕ್
ವೇಗಿಗಳಾದ ವಾಸುಕಿ ಕೌಶಿಕ್ (18ಕ್ಕೆ 3) ಮತ್ತು ವಿದ್ವತ್ ಕಾವೇರಪ್ಪ (17ಕ್ಕೆ 2) ಅವರ ಮಾರಕ ದಾಳಿಯ ಬಲದಿಂದ ಜಾರ್ಖಂಡ್ ತಂಡದ ವಿರುದ್ಧ ಕರ್ನಾಟಕ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಟೂರ್ಜಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿ ಮುನ್ನುಗ್ಗುತ್ತಿದೆ.
ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಜಾರ್ಖಂಡ್ ಯಾವುದೇ ಹಂತದಲ್ಲೂ ಸವಾಲೆನಿಸಲಿಲ್ಲ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಾರ್ಖಂಡ್ ಕರ್ನಾಟಕ ವೇಗಿಗಳ ಮಾರಕ ಎಸೆತಗಳಿಗೆ ತತ್ತರಿಸಿತು. ಕೇಲವ 10 ರನ್ ಗಳಿಸುವಷ್ಟರಲ್ಲೇ 4 ವಿಕೆಟ್ ಕಳೆದಿಕೊಂಡಿದ್ದ ತಂಡ 40.4 ಓವರ್ಗಳಲ್ಲಿ ಕೇವಲ 107 ರನ್ ಗಳಿಗೆ ಸರ್ವಪತನ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಕುಮಾರ್ ಕುಶಾಗ್ರ (56) ಗಟ್ಟಿಯಾಗಿ ನೆಲೆಯೂರದಿದ್ದರೆ ತಂಡ ಕನಿಷ್ಠ ಮೊತ್ತಕ್ಕೆ ಕುಸಿಯುವ ಭೀತಿಯಿತ್ತು. ಸುಲಭ ಗುರಿ ಬೆನ್ನತ್ತಿದ ಕರ್ನಾಟಕ 26.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ವಿಜಯೋತ್ಸವ ಆಚರಿಸಿತು. ರಾಜ್ಯದ ಪರ ನಾಯಕ ಮಾಯಂಕ್ ಅಗರ್ ವಾಲ್ (53) ಅರ್ಧಶತಕ ಗಳಿಸಿ ಮಿಂಚಿದರು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಗುರುವಾರ ದೆಹಲಿ ಎದುರು ಆಡಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ