ದಿಗಂತ ವರದಿ ವಿಜಯಪುರ:
ಮೆಕ್ಕೆಜೋಳ ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಬೃಹತ್ ಮೇಲಟ್ಟ ಕುಸಿದು ಬಿದ್ದು, ಕಳೆದ ರಾತ್ರಿಯಿಂದ ಜೀವನ್ಮರಣದಲ್ಲಿ ನರಳುತ್ತಿದ್ದ ಬಿಹಾರದ 8 ಕಾರ್ಮಿಕರ ಪೈಕಿ 7 ಮಂದಿ ಕಾರ್ಮಿಕರು ದಾರುಣ ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಗರ ಹೊರ ಭಾಗದ ಕೈಗಾರಿಕಾ ಪ್ರದೇಶದ ರಾಜಗುರು ಫುಡ್ಸ್ ನ
ಬೃಹತ್ ಗೋದಾಮಿನಲ್ಲಿ ನಡೆದಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಾಣೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 8 ಜನ ಕಾರ್ಮಿಕರಲ್ಲಿ 7 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಎಲ್ಲರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ ಎಂದರು.
ಇಲ್ಲಿನ ರಾಜಗುರು ಫುಡ್ ಗೋದಾಮಿನಲ್ಲಿ ಬಿಹಾರ ಕಾರ್ಮಿಕರು ಸಿಲುಕಿಕೊಂಡಿದ್ದರು. ಸತತ 17 ಗಂಟೆ ಕಾರ್ಯಾಚರಣೆ ನಡೆಸಲಾಗಿದೆ. 8 ಜನ ಕಾರ್ಮಿಕರಲ್ಲಿ 7ಜನ ಕಾರ್ಮಿಕರು ಅಸುನೀಗಿದ್ದಾರೆ.
7ನೇ ಕಾರ್ಮಿಕನ ಮೃತ ದೇಹಗಳನ್ನು ರಕ್ಷಣಾ ಕಾರ್ಯಾಚರಣೆ ನಡೆಸಿ, ಹೊರಗಡೆ ತೆಗೆಯಲಾಗಿದೆ. ರಾಜಗುರು ಫುಡ್ ಮಾಲೀಕ, ಸೂಪರ್ವೈಸರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದರು.
ಮೃತರ ವಿವರ:
ಬಿಹಾರ ಮೂಲದ ಕಾರ್ಮಿಕರಾದ ರಾಜೇಶ ಮುಖಿಯಾ (25), ರಾತ್ರೀಜ್ ಮುಖಿಯಾ (29), ಶಂಬು ಮುಖಿಯಾ (26), ರಾಮ್ ಬಾಲಕ್ (38), ಲೋಖಿ ಜಾಧವ್ (56), ಕಿಶನಕುಮಾರ (20) ಹಾಗೂ ದಾಲನಚಂದ ಮುಖನ ಮೃತ ಪಟ್ಟ ಏಳು ಜನರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇನ್ನು 4 ಜನ ಕಾರ್ಮಿಕರನ್ನು ಕಳೆದ ರಾತ್ರಿ ರಕ್ಷಣೆ ಮಾಡಲಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಸೋಮವಾರ ಸಂಜೆ ಈ ದುರಂತ ನಡೆದಿದ್ದು, ಸತತ 17 ಗಂಟೆಗಳ ಕಾಲ ರಕ್ಷಣಾ ಹಾಗೂ ಪತ್ತೆ ಕಾರ್ಯವನ್ನು ಕಲಬುರಗಿಯ ಎಸ್’ಡಿಆರ್’ಎಫ್ ಸೇರಿದಂತೆ ಸ್ಥಳೀಯ ರಕ್ಷಣಾ ತಂಡದಿದ ಕಾರ್ಯಾಚರಣೆ
ನಡೆಸಲಾಗಿತ್ತು.
ಈ ಅವಘಡದ ಸುದ್ದಿ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಬೆಳಗಾವಿ ಅಧಿವೇಶನದಿಂದ ತಡರಾತ್ರಿ ನಗರಕ್ಕೆ ಆಗಮಿಸಿ, ಘಟನಾ ಸ್ಥಳಕ್ಕೆ ತೆರಳಿ, ಕಾರ್ಯಾಚರಣೆ ಪರಿಶೀಲಿಸಿದ್ದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಜಿಪಂ ಸಿಇಒ ರಾಹುಲ್ ಶಿಂಧೆ ಸೇರಿ ಇತರೆ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದರು.