ಹೊಸದಿಗಂತ ವರದಿ, ವಿಜಯಪುರ
ಶಿಶು ಸಾಹಿತಿ, ನಿವೃತ್ತ ಶಿಕ್ಷಕ ಶರಣಪ್ಪ ಕಂಚ್ಯಾಣಿ (92) ಬುಧವಾರ ವಿಧಿವಶರಾದರು.
ಮೃತರು, ನಿವೃತ್ತ ಪ್ರಾಚಾರ್ಯ ಅರವಿಂದ ಕಂಚ್ಯಾಣಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಸೇರಿದಂತೆ ಐವರು ಪುತ್ರರು, ಮೂವರು ಪುತ್ರಿಯರು ಸಹಿತ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.
ಶರಣಪ್ಪ ಕಂಚ್ಯಾಣಿ ಅವರು ಮೂರು ದಿನಗಳ ಹಿಂದೆ ಮನೆಯ ಬಚ್ಚಲಕೋಣೆಯಲ್ಲಿ ಬಿದ್ದು, ತೊಡೆಯ ಮೂಳೆ ಮುರಿತದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ನಿಮೋನಿಯಾ ಕಂಡು ಬಂದಿದ್ದು, ಅಸುನೀಗಿದ್ದಾರೆ.
ಮೃತರ ಪ್ರಾರ್ಥಿವ ಶರೀರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಅವರ ಇಚ್ಛೆಯಂತೆ, ಇಲ್ಲಿನ ಬಿಎಲ್’ಡಿಇ ಸಂಸ್ಥೆ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹಸ್ತಾಂತರ ಮಾಡಲಿದ್ದಾರೆ.
ಹಿರಿಯ ಸಾಹಿತಿ ಶರಣಪ್ಪ ಕಂಚ್ಯಾಣಿಯವರು ಮೂಲತಃ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದವರು. ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ವಿಜಯಪುರದಲ್ಲಿ ನೆಲೆಸಿದ್ದರು. ಮಕ್ಕಳ ಸಾಹಿತಿಯಾದ ಅವರಿಗೆ ರಾಜ್ಯ, ರಾಷ್ಟ್ರಮಟ್ಟದ ಹಲವು ಪ್ರಶಸ್ತಿ ಸೇರಿದಂತೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿವೆ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ