May 4, 2026
Monday, May 4, 2026
spot_img

ವಿಜಯನಗರದ ಹಂಪಿ ಸ್ಮಾರಕದ ಸ್ತಂಭಕ್ಕೆ ಧಕ್ಕೆ: ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಂಪಿಯ ನೆಲಮಹಡಿ ಶಿವ ದೇವಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ವತಿಯಿಂದ ನಡೆಯುತ್ತಿರುವ ಪುನಶ್ಚೇತನ ಕಾಮಗಾರಿ ವೇಳೆ ಸ್ಮಾರಕ ಸ್ತಂಭವೊಂದನ್ನು ತುಂಡರಿಸಿದ ಮತ್ತು ಅದನ್ನು ನಾಪತ್ತೆ ಮಾಡಿದ ಕುರಿತಂತೆ ಹಂಪಿ ಠಾಣೆಗೆ ಕಮಲಾಪುರದ ಟಿ.ಶಿವಕುಮಾರ್ ಎಂಬುವವರು ದೂರು ನೀಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆಯ ವಿಜಯನಗರ ಜಿಲ್ಲಾಧ್ಯಕ್ಷರೂ ಆಗಿರುವ ಕಮಲಾಪುರ ನಿವಾಸಿ ಟಿ ಶಿವಕುಮಾರ್, ಎಎಸ್‌ಐ ನೇತೃತ್ವದ ಪುನಃಸ್ಥಾಪನೆ ಕಾರ್ಯಗಳ ಅಡಿಯಲ್ಲಿ ಪಕ್ಕದ ಗೋಡೆಯನ್ನು ನಿರ್ಮಿಸುವಾಗ ವಿಜಯನಗರ ಸಾಮ್ರಾಜ್ಯದ ಯುಗಕ್ಕೆ ಸೇರಿದ ಕಲ್ಲಿನ ಕಂಬವನ್ನು ಯಂತ್ರಗಳು ಮುರಿದಿವೆ ಎಂದು ಆರೋಪಿಸಿದ್ದಾರೆ.

ಶಿವ ದೇವಸ್ಥಾನದ ಬಳಿ ಸೈಡ್‌ವಾಲ್ ಕಟ್ಟುವ ವೇಳೆ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಕಲ್ಲುಗಳನ್ನು ಯಂತ್ರ ಬಳಸಿ ತುಂಡರಿಸಲಾಗಿತ್ತು. ಡಿ.2ರಂದು ಈ ಬಗ್ಗೆ ಎಎಸ್ಐಗೆ ದೂರು ನೀಡಿದ್ದೆ. ಆದರೆ ಕ್ರಮ ಕೈಗೊಳ್ಳಲಿಲ್ಲ. ಬಳಿಕ ಅದೇ ಪಿಲ್ಲರ್‌ ಅನ್ನು ಒಡೆದು ಹಾಕಿದ್ದಲ್ಲದೆ, ಬಳಿಕ ಅದನ್ನು ನಾಪತ್ತೆ ಮಾಡಲಾಗಿದೆ, ಹೀಗಾಗಿ ಎಎಸ್ಐ ಅಧೀಕಾರಿಗಳನ್ನು ಸಹ ಕರಿಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ದೂರು ಸ್ವೀಕರಿಸಲಾಗಿದೆ, ಅದರ ಬಗ್ಗೆ ಪರಿಶೀಲಿಸಿ, ಎಎಸ್‌ಐ ಅಧಿಕಾರಿಗಳಿಂದ ವಿವರಣೆ ಪಡೆಯುವ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಸ್ಥಳೀಯರು ತೋರಿಸಿದ ಛಾಯಾಚಿತ್ರವು ಭೂಗತ ಶಿವ ದೇವಾಲಯದ ಬಳಿ ಬಿದ್ದಿರುವ ಕಂಬದ ಹಾನಿಗೊಳಗಾದ ಅವಶೇಷಗಳನ್ನು ತೋರುತ್ತಿದೆ, ಇದು ಸ್ಥಳದ ಶತಮಾನಗಳಷ್ಟು ಹಳೆಯದಾದ ರಚನೆಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !